ಎಡನೀರು ಶ್ರೀಗಳಿಗೆ ಉಡುಪಿಯಲ್ಲಿ ಪೇಜಾವರ ಶ್ರೀಪಾದರ ನೇತೃತ್ವದಲ್ಲಿ ಶ್ರದ್ಧಾಂಜಲಿ ಸಮರ್ಪಣೆ

ಉಡುಪಿ: ಶನಿವಾರ ನಮ್ಮನ್ನಗಲಿದ ಕಾಸರಗೋಡು ಎಡನೀರು ಶ್ರೀ ಜಗದ್ಗುರು ಶಂಕರಾಚಾರ್ಯ ಸಂಸ್ಥಾನದ ಮಠಾಧೀಶ ಕೇಶವಾನಂದ ಭಾರತೀ ತೀರ್ಥ ಮಹಾಸ್ವಾಮಿಗಳ ದಿವ್ಯಾತ್ಮಕ್ಕೆ ಸದ್ಗತಿಯನ್ನು ಪ್ರಾರ್ಥಿಸಿ ಉಡುಪಿಯ ಸಂಸ್ಕೃತ ಮಹಾವಿದ್ಯಾಲಯ ಮತ್ತು ಶ್ರೀಗಳ ಅಭಿಮಾನಿಗಳ ವತಿಯಿಂದ ಇಂದು ಕಾಲೇಜಿನ ಆವರಣದಲ್ಲಿ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮಾತನಾಡಿ, ಎಡನೀರು ಶ್ರೀಗಳ ಆಧ್ಯಾತ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ ಸಾಮಾಜಿಕ ಮತ್ತು ಧಾರ್ಮಿಕ ಕೊಡುಗೆಗಳನ್ನು ಹಾಗೂ ಉಡುಪಿಯ ಮಠಗಳು ಸಂಸ್ಕೃತ ಕಾಲೇಜಿನೊಂದಿಗಿನ‌ ಬಾಂಧವ್ಯವನ್ನು ಸ್ಮರಿಸಿದರು.

ಶ್ರೀಗಳ ಆದರ್ಶಗಳು ನಮಗೆಲ್ಲ ಸದಾ ಮಾರ್ಗದರ್ಶಕವಾಗಲಿ. ಅವರ ದಿವ್ಯಾತ್ಮಕ್ಕೆ ಭಗವಂತನು ಸದ್ಗತಿಯನ್ನು ಕರುಣಿಸಲಿ ಎಂದು ಪ್ರಾರ್ಥಿಸಿ ನುಡಿನಮನ ಸಲ್ಲಿಸಿದರು.

ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿ ದೇವಾನಂದ ಉಪಾಧ್ಯಾಯ, ಪ್ರಾಚಾರ್ಯ ಡಾ. ಎನ್.ಎಲ್. ಭಟ್, ಪೇಜಾವರ ಮಠದ ದಿವಾನ ಎಂ. ರಘುರಾಚಾರ್ಯ, ಉದ್ಯಮಿ ಯಶ್ ಪಾಲ್ ಸುವರ್ಣ , ಉಡುಪಿ ಸಾಮಾಜಿಕ ಅರಣ್ಯ ವಿಭಾಗ ವಲಯ ಅರಣ್ಯಾಧಿಕಾರಿ ರವೀಂದ್ರ ಆಚಾರ್ಯ , ಯಕ್ಷಗಾನ ಕಲಾರಂಗದ ಉಪಾಧ್ಯಕ್ಷ ಎಸ್.ವಿ. ಭಟ್, ಕಾಲೇಜಿನ ಆಡಳಿತ ಮಂಡಳಿ ಸದಸ್ಯರು, ಉಪನ್ಯಾಸಕ ವೃಂದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀಗಳ ಆತ್ಮಕ್ಕೆ ಸದ್ಗತಿ ಪ್ರಾರ್ಥಿಸಿ ಸಾಮೂಹಿಕವಾಗಿ ರಾಮಮಂತ್ರ ಜಪಿಸಲಾಯಿತು. ವಾಸುದೇವ ಭಟ್ ಪೆರಂಪಳ್ಳಿ ಕಾರ್ಯಕ್ರಮ ನಿರೂಪಿಸಿದರು .