ಕಾರ್ಕಳದಲ್ಲಿ ‘ಯಕ್ಷ ರಂಗಾಯಣ’ ಸ್ಥಾಪನೆ: ರಂಗಭೂಮಿ ಕ್ಷೇತ್ರದಲ್ಲಿ ಹೊಸದೊಂದು ಮೈಲಿಗಲ್ಲು ನಿರ್ಮಾಣ: ವಿ. ಸುನಿಲ್‌ ಕುಮಾರ್

ಕಾರ್ಕಳ: ನಮ್ಮ ಕರಾವಳಿ ಮತ್ತು ಮಲೆನಾಡು ಪ್ರದೇಶವು ಅತ್ಯಂತ ಶ್ರೀಮಂತ ಕಲೆ ಯಕ್ಷಗಾನ ಮತ್ತು ಸಾಂಸ್ಕೃತಿಕ ಹಿರಿಮೆಗೆ ಪ್ರಸಿದ್ಧ. ಈಗ ಈ ಭಾಗದ ರಂಗಭೂಮಿ ಕ್ಷೇತ್ರದಲ್ಲಿ ಹೊಸದೊಂದು ಮೈಲಿಗಲ್ಲು ನಿರ್ಮಾಣವಾಗಿದೆ. ಕರ್ನಾಟಕದ ಆರನೇ ರಂಗಾಯಣವಾಗಿ, ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ‘ಯಕ್ಷ ರಂಗಾಯಣ’ವು ಆರಂಭವಾಗಲಿದೆ. ಈ ಕುರಿತು ಈಗಾಗಲೇ ಸರ್ಕಾರಿ ಆದೇಶವು ಹೊರಬಿದ್ದಿದ್ದು , ‘ಯಕ್ಷ ರಂಗಾಯಣ’ವು ಕಾರ್ಕಳದ ಕೋಟಿ ಚೆನ್ನಯ ಥೀಮ್ ಪಾರ್ಕ್ನ ಬಳಿ ಕಾರ್ಯಾರಂಭ ಮಾಡಲಿದೆ.

ಈ ಯಕ್ಷರಂಗಾಯಣದಲ್ಲಿ ತುಳು ನಾಟಕದ ಹಿನ್ನೆಲೆಯಲ್ಲಿನ ನಾಟಕಗಳ ರಂಗಪ್ರಯೋಗ ಹಾಗೂ ಪ್ರದರ್ಶನ ಹಾಗೂ ತೆಂಕು, ಬಡಗು ತಿಟ್ಟಿನ ಯಕ್ಷಗಾನ ಆಧಾರಿತ ನಾಟಕಗಳ ರಂಗಶಾಲೆ ರೂಪುಗೊಳ್ಳಲಿದೆ. ಇಲ್ಲಿ ವಿವಿಧ ರಂಗ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಿ ಯಕ್ಷಗಾನ ತರಬೇತಿ, ರಂಗ ಶಿಬಿರಗಳು, ಕರಾವಳಿ/ಮಲೆನಾಡಿನ ಪ್ರಾದೇಶಿಕ ಸೊಗಡನ್ನು ಪರಿಚಯಿಸುವ ನಾನಾ ರಂಗ ಚಟುವಟಿಕೆಗಳು ಆರಂಭವಾಗಲಿವೆ.

ಕಾರ್ಕಳದಲ್ಲಿರುವ ಕೋಟಿ ಚೆನ್ನಯ ಥೀಮ್‌ಪಾರ್ಕ್ನ ಬಳಿ ಎರಡು ಎಕರೆ ವಿಶಾಲ ಆವರಣದಲ್ಲಿ ಸುಮಾರು ೨ ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣ ಮಾಡಿ ಯಕ್ಷರಂಗಾಯಣ ಕಾರ್ಯಾರಂಭ ಮಾಡಲಿದೆ. ರಂಗಶಾಲೆಗಾಗಿ ಅವಶ್ಯವಿರುವ ಕೊಠಡಿಗಳು, ರಂಗವೇದಿಕೆ, ಸಭಾಂಗಣ, ಕಚೇರಿ ಹಾಗೂ ಇತರ ಅವಶ್ಯಕತೆಗಳಿಗೆ ತಕ್ಕ ಸ್ಥಳವು ಈ ಕಟ್ಟಡದಲ್ಲಿ ಲಭ್ಯವಿದೆ. ಯಕ್ಷಗಾನದ ತೆಂಕು ಮತ್ತು ಬಡಗು ಎರಡೂ ತಿಟ್ಟುಗಳನ್ನು ಸಮನ್ವಯಗೊಳಿಸಲು ವೇದಿಕೆ ಕಲ್ಪಿಸಲಿದೆ.

ಶ್ರೀ ಶಿವರಾಮ ಕಾರಂತರ ಯಕ್ಷಗಾನ ಹಾಗೂ ಶ್ರೀ ಬಿ.ವಿ. ಕಾರಂತರ ರಂಗಭೂಮಿ, ಈ ಇಬ್ಬರು ಮಹಾನ್ ಸಾಧಕರ ರಂಗಕೃಷಿಯ ಕೆಲಸಗಳನ್ನು ಮಾದರಿಯಾಗಿಟ್ಟುಕೊಂಡು, ಈ ರಂಗಾಯಣವು ರಂಗಭೂಮಿ ಮತ್ತು ಯಕ್ಷಗಾನ ಕಲೆಯ ಕೊಂಡಿಯಾಗಿ ಕೆಲಸ ಮಾಡಲಿದೆ. ಈ ಇಬ್ಬರು ಯಕ್ಷ-ರಂಗ ಭೀಷ್ಮರು ರೂಪಿಸಿದ ಅಂಶಗಳನ್ನು ಕರಾವಳಿ ಭಾಗದ ಸಾಂಸ್ಕೃತಿಕ ಸೊಗಡನ್ನು ಅಳವಡಿಸಿಕೊಂಡು ರಂಗಚಟುವಟಿಕೆಗಳನ್ನು ಆರಂಭಿಸಲಾಗುತ್ತದೆ.

ಕಾರ್ಕಳದಲ್ಲಿ ಸ್ಥಾಪಿತಗೊಳ್ಳುತ್ತಿರುವ ಯಕ್ಷರಂಗಾಯಣಕ್ಕೆ ಶೀಘ್ರದಲ್ಲಿ ಪೂರ್ಣಾವಧಿ ನಿರ್ದೇಶಕರನ್ನು ನೇಮಕ ಮಾಡಲಾಗುವುದು. ಹಾಗೂ ಪರಿಣತರ ಸಮಿತಿ ರಚಿಸಿ ಕಾರ್ಯಚಟುವಟಿಕೆಗಳನ್ನು ಆರಂಭಿಸಲಾಗುವುದು. ನಂತರ, ಸರ್ಕಾರದಿಂದ ಸೃಜನೆಗೊಂಡ ಉಳಿದ ಆಡಳಿತಾತ್ಮಕ ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ ಎಂದು ಸಚಿವರ ಕಛೇರಿ ಪ್ರಕಟಣೆ ತಿಳಿಸಿದೆ.