ಮಣಿಪಾಲ: ಕೆ.ಎಂ.ಸಿ ಆಸ್ಪತ್ರೆಯಲ್ಲಿ ವಿಶ್ವ ಹೆಪಟೈಟಿಸ್ ದಿನಾಚರಣೆ

ಮಣಿಪಾಲ: ವೈರಲ್ ಹೆಪಟೈಟಿಸ್ ಬಗ್ಗೆ ಜಾಗೃತಿ ಮೂಡಿಸಲು, ತಡೆಗಟ್ಟುವ ಕ್ರಮಗಳನ್ನು ಉತ್ತೇಜಿಸಲು ಮತ್ತು ರೋಗದ ತಪಾಸಣೆ ಮತ್ತು ಚಿಕಿತ್ಸೆಯನ್ನು ಪ್ರೋತ್ಸಾಹಿಸಲು ಪ್ರತೀ ವರ್ಷ ಜುಲೈ 28 ರಂದು ವಿಶ್ವ ಹೆಪಟೈಟಿಸ್ ದಿನವನ್ನಾಗಿ ಜಾಗತಿಕವಾಗಿ ಆಚರಿಸಲಾಗುತ್ತದೆ. ವಿಶ್ವ ಹೆಪಟೈಟಿಸ್ ದಿನದ ಈ ವರ್ಷದ ಘೋಷ ವಾಕ್ಯ ‘ನಾವು ಕಾಯುತ್ತಿಲ್ಲ’. ಈ ರೋಗದ ಬಗ್ಗೆ ಮಾಹಿತಿ ಇಲ್ಲದವರು ತಕ್ಷಣ ಪರೀಕ್ಷೆಗೆ ಒಳಗಾಗಬೇಕು ಮತ್ತು ತಕ್ಷಣವೇ ಜೀವರಕ್ಷಕ ಚಿಕಿತ್ಸೆಯನ್ನು ಪಡೆಯಬೇಕು. ವಿಶ್ವ ಆರೋಗ್ಯ ಸಂಸ್ಥೆಯು 2030 ರ ವೇಳೆಗೆ ಹೆಪಟೈಟಿಸ್ ಕಾಯಿಲೆಯನ್ನು ತೊಡೆದು ಹಾಕುವ ಗುರಿಯನ್ನು ಹೊಂದಿದೆ.

ಇದರ ಭಾಗವಾಗಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಸರಕಾರಿ ವೈದ್ಯರಿಗೆ ವೈರಲ್ ಹೆಪಟೈಟಿಸ್ ಕುರಿತು ಕಾರ್ಯಾಗಾರವನ್ನು ಆಯೋಜಿಸಿತ್ತು.

ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ಮಾತನಾಡಿ, ಭಾರತದಲ್ಲಿ ಬಹಳಷ್ಟು ಜನರು ದಿನಂಪ್ರತಿ ಹೆಪಟೈಟಿಸ್ ವೈರಾಣು ಸೋಂಕಿಗೆ ತುತ್ತಾಗುತ್ತಿದ್ದಾರೆ. ಇದನ್ನು ಹೊಗಲಾಡಿಸಲು ಈ ರೋಗದ ಬಗ್ಗೆ ತಿಳಿದಿಲ್ಲದ ಜನರು ತಕ್ಷಣ ಪರೀಕ್ಷೆಗೆ ಒಳಗಾಗಬೇಕು ಮತ್ತು ತಕ್ಷಣವೇ ಜೀವರಕ್ಷಕ ಚಿಕಿತ್ಸೆಯನ್ನು ಪಡೆಯಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯರಿಗೆ ಇದರ ಕುರಿತು ಜ್ಞಾನ ಮೂಡಿಸಲು ಈ ಕಾರ್ಯಾಗಾರವನ್ನು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಸಹಯೋಗದಲ್ಲಿ ಆಯೋಜಿಸಿದ್ದೇವೆ. ವೈದ್ಯರು ಇದರ ಪ್ರಯೋಜನ ಪಡೆದುಕೊಂಡು ಸಮುದಾಯದಲ್ಲಿ ಹೆಪಟೈಟಿಸ್ ಸೋಂಕಿನ ಬಗ್ಗೆ ಆರಂಭದಲ್ಲಿಯೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ನೀಡುವಲ್ಲಿ ನೆರವಾಗಬೇಕು ಎಂದು ಹೇಳಿದರು.

ಡಾ ಆನಂದ್ ವೇಣುಗೋಪಾಲ್, ಸಿಒಒ- ಬೋಧನಾ ಆಸ್ಪತ್ರೆ ಮಾಹೆ ಮಣಿಪಾಲ, ಡಾ ಅವಿನಾಶ್ ಶೆಟ್ಟಿ- ವೈದ್ಯಕೀಯ ಅಧೀಕ್ಷಕರು, ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಡಾ ಚಿದಾನಂದ ಸಂಜು ಎಸ್ ವಿ – ಜಿಲ್ಲಾ ಕ್ಷಯ ಮತ್ತು ಏಡ್ಸ್ ನಿಯಂತ್ರಣ ಅಧಿಕಾರಿ ಹಾಗೂ ಡಾ ಶಿರನ್ ಶೆಟ್ಟಿ, ಮುಖ್ಯಸ್ಥರು – ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ ಮತ್ತು ಗೌರವ ಸಲಹೆಗಾರರು & ವಿಷಯ ತಜ್ಞರು- ಉಡುಪಿ ಜಿಲ್ಲಾ ವೈರಲ್ ಹೆಪಟೈಟಿಸ್ ನಿಯಂತ್ರಣ ಸಮಿತಿ ಉಪಸ್ಥಿತರಿದ್ದರು.

ಕಸ್ತೂರ್ಬಾ ಆಸ್ಪತ್ರೆ ಮಣಿಪಾಲದ ಗ್ಯಾಸ್ಟ್ರೋಎಂಟರಾಲಜಿ ಮತ್ತು ಹೆಪಟಾಲಜಿ ವಿಭಾಗದ ಪ್ರಾದ್ಯಾಪಕ ಹಾಗೂ ಮುಖ್ಯಸ್ಥ ಡಾ.ಶಿರನ್ ಶೆಟ್ಟಿ, ಪ್ರಾಧ್ಯಾಪಕ ಡಾ.ಗಣೇಶ್ ಭಟ್, ಬೆಂಗಳೂರಿನ ನಿಮ್ಹಾನ್ಸ್ ನ ನ್ಯೂರೋ ವೈರಾಲಜಿ ವಿಭಾಗದ ಹಿರಿಯ ವೈಜ್ಞಾನಿಕ ಅಧಿಕಾರಿ ಡಾ.ಅಶ್ವಿನಿ ಎಂ.ಎ. ಕೆ.ಎಂ.ಸಿ ಮಣಿಪಾಲದ ಸಮುದಾಯ ಆರೋಗ್ಯ ವಿಭಾಗದ ಪ್ರಾಧ್ಯಾಪಕ ಡಾ. ಚೈತ್ರ ಆರ್ ರಾವ್ ಸಂಪನ್ಮೂಲ ವ್ಯಕ್ತಿಗಳಾಗಿ ವಿವಿಧ ವಿಷಯಗಳ ಬಗ್ಗೆ ಮಾತನಾಡಿದರು.

ಡಾ ದಿವ್ಯಾ ಅರವಿಂದ್ ಪ್ರಭು ಅವರು ಕಾರ್ಯಾಗಾರದ ಪರಿಚಯ ನೀಡಿ ಕಾರ್ಯಕ್ರಮ ನಿರೂಪಿಸಿದರು.