ಮಣಿಪಾಲ ಕೆಎಂಸಿಯಿಂದ ವಿಶ್ವ ಮಧುಮೇಹ ದಿನಾಚರಣೆ: ಮರಳು ಶಿಲ್ಪ ಕಲಾಕೃತಿಯ ಪ್ರದರ್ಶನ

ಮಣಿಪಾಲ: ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಅಂತಃಸ್ರಾವಶಾಸ್ತ್ರ (ಎಂಡೋ ಕ್ರೈ ನೊಲೊಜಿ) ವಿಭಾಗವು ಮಲ್ಪೆ ಬೀಚ್‌ನಲ್ಲಿ ಮಧುಮೇಹದ ಬಗ್ಗೆ ಜಾಗೃತಿ ಮೂಡಿಸುವ ಮರಳು ಶಿಲ್ಪ ಕಲಾಕೃತಿ ರಚಿಸುವುದರ ಮೂಲಕ ವಿಶಿಷ್ಟ ರೀತಿಯಲ್ಲಿ ವಿಶ್ವ ಮಧುಮೇಹ ದಿನಾಚರಣೆ ಆಚರಿಸಲಾಯಿತು.

ಮರಳು ಶಿಲ್ಪವನ್ನು ಅನಾವರಣಗೊಳಿಸಿ ಮಾತನಾಡಿದ ಆಸ್ಪತ್ರೆಯ ಡೀನ್ ಡಾ. ಶರತ್ ರಾವ್, ಮಧುಮೇಹ ರೋಗಿಗಳ ಸಂಖ್ಯೆಯಲ್ಲಿ ಭಾರತವು ವಿಶ್ವದ ಎರಡನೇ ಸ್ಥಾನದಲ್ಲಿದೆ. ಅದರಲ್ಲೂ2/3 ರಷ್ಟು ರೋಗಿಗಳು ದಕ್ಷಿಣ ಭಾರತದ ರಾಜ್ಯದಲ್ಲಿ ಇರುವುದು ಕಳವಳಕಾರಿಯಾದ ವಿಷಯವಾಗಿದೆ.

ನಿಯಮಿತ ತಪಾಸಣೆ, ಮಾನಸಿಕ ಬೆಂಬಲ, ಮತ್ತು ಸ್ವ-ನಿರ್ವಹಣೆ ಮತ್ತು ಆರೋಗ್ಯಕರ ಬದುಕಿನ ಮಾಹಿತಿ ಸೇರಿದಂತೆ ಮಧುಮೇಹ ಇರುವವರಿಗೆ ಆಜೀವ ಆರೈಕೆಯನ್ನು ಒದಗಿಸುವಲ್ಲಿ ದಾದಿಯರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು.

ಮುಖ್ಯ ನಿರ್ವಹಣಾಧಿಕಾರಿಗಳಾದ ಸಿ.ಜಿ. ಮುತ್ತನ ಮತ್ತು ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಜಂಟಿಯಾಗಿ ಸೆಲ್ಫಿ ಸ್ಟ್ಯಾಂಡ್ ಅನ್ನು ಉದ್ಘಾಟಿಸಿದರು. ಅಂತಃಸ್ರಾವಶಾಸ್ತ್ರ (ಎಂಡೋ ಕ್ರೈ ನೊಲೊಜಿ) ವಿಭಾಗದ ಮುಖ್ಯಸ್ಥೆ ಡಾ. ಸಹಾನಾ ಶೆಟ್ಟಿ ಅನನ್ಯ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು.