ಬಡ್ಡಿಯ ಆಸೆಗೆ ಬಿದ್ದು ಬರೋಬ್ಬರಿ 20 ಕೋಟಿ ಮೊತ್ತದ ಚಿನ್ನ ಕಳೆದುಕೊಂಡ ಮಹಿಳೆಯರು

ಮಂಡ್ಯ: ಬ್ಯಾಂಕ್ ಉದ್ಯೋಗಿಯೊಬ್ಬನ ಕುತಂತ್ರಕ್ಕೆ ಬಲಿಯಾಗಿ ಸ್ತೀಯರು 20 ಕೋಟಿ ರೂ. ಗೂ ಅಧಿಕ ಮೊತ್ತದ ಚಿನ್ನವನ್ನು ಕಳೆದುಕೊಂಡಿರುವ ಪ್ರಕರಣ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.

ಮಂಡ್ಯದ ಗುತ್ತಲು ಬಡಾವಣೆಯ ನಿವಾಸಿ ಸೋಮಶೇಖರ್ ಮಹಿಳೆಯರಿಗೆ ವಂಚಿಸಿದ ಖದೀಮ. ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಇರುವ ಈ ಫೆಡ್ ಬ್ಯಾಂಕ್‌ನಲ್ಲಿ ಎಕ್ಸಿಕ್ಯೂಟಿವ್ ಆಗಿ ಕೆಲಸ ಮಾಡುತ್ತಿದ್ದ ಈತ, ನಯ ನಾಜೂಕಿನ ಮಾತುಗಳಿಂದ ತಮ್ಮ ಬ್ಯಾಂಕ್‌ನಲ್ಲಿ ಚಿನ್ನ ಇಟ್ಟರೆ ಅಧಿಕ ಬಡ್ಡಿ ಕೊಡ್ತಾರೆಂದು ಮಹಿಳೆಯರನ್ನು ನಂಬಿಸಿದ್ದ.

ನಮ್ಮಲ್ಲಿ ವಾರಕ್ಕೆ ಶೇ 10ರಷ್ಟು ಹಾಗೂ ತಿಂಗಳಿಗೆ ಶೇ 40% ಬಡ್ಡಿ ಕೊಡಿಸುವುದಾಗಿ ನಂಬಿಸಿದ್ದ. ಮಹಿಳೆಯರಿಂದ ಪಡೆದ ಚಿನ್ನವನ್ನು ಈತ ಬ್ಯಾಂಕ್‌ನಲ್ಲಿ ಇಟ್ಟಿರುವುದಾಗಿ ಹೇಳಿ, ಕೆಲ ತಿಂಗಳ ಕಾಲ ಬಡ್ಡಿಯನ್ನೂ ಕೊಡುತ್ತಾ ಬಂದಿದ್ದ. ಇದನ್ನು ನಂಬಿದ್ದ ಹಲವು ಮಹಿಳೆಯರು ಈತನಿಗೆ ತಮ್ಮಲ್ಲಿದ್ದ ಚಿನ್ನವೆನ್ನಲ್ಲವನ್ನೂ ನೀಡಿದ್ದರು.

ಈತನು ಮಹಿಳೆಯರಿಯಿಂದ ಬರೋಬ್ಬರಿ 20 ಕೋಟಿ ಮೌಲ್ಯದ ಕೆಜಿ ಗಟ್ಟಲೆ ಚಿನ್ನ ಸಂಗ್ರಹಣೆ ಮಾಡಿದ್ದು, ಕೆಲವು ತಿಂಗಳು ಬಡ್ಡಿ ನೀಡಿದ್ದ ಈತ ಕೆಲ ತಿಂಗಳ ಬಳಿಕ ನಾಪತ್ತೆಯಾಗಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯ ಪತ್ತೆಗಾಗಿ ತನಿಖೆ ನಡೆಸುತ್ತಿದ್ದಾರೆ.