ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೀಡಿದ 2 ಲಕ್ಷ ರೂ ಹಣದ ಕಟ್ಟು ವಾಪಸ್ ಎಸೆತ: ಹಣ ಬೇಡ, ಸಮಾಜದಲ್ಲಿ ಶಾಂತಿ ಬೇಕು ಎಂದ ಮಹಿಳೆ

ಕೆರೂರು: ಬಾಗಲಕೋಟೆಯ ಕೆರೂರಿನಲ್ಲಿ ಶುಕ್ರವಾರ ನಡೆದ ಹಿಂಸಾಚಾರದಲ್ಲಿ ಗಾಯಗೊಂಡ ನಾಲ್ವರಲ್ಲಿ ಒಬ್ಬರ ಕುಟುಂಬದ ಸದಸ್ಯೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನೀಡಿದ 2 ಲಕ್ಷ ರೂ. ಗಳ ಹಣದ ಕಟ್ಟನ್ನು ಅವರ ಕಾರಿನ ಮೇಲೆ ವಾಪಸ್ ಎಸೆದಿದ್ದಾರೆ. ಇಷ್ಟು ದಿನ ಕಳೆದರೂ ಯಾವೊಬ್ಬ ನಾಯಕನೂ ಭೇಟಿಗೆ ಬಾರದಿರುವುದಕ್ಕೆ ಗಾಯಾಳುಗಳ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಗಾಯಾಳುಗಳಿಗೆ ಸಾಂತ್ವನ ಹೇಳಲು ಯತ್ನಿಸಿದ್ದರಲ್ಲದೇ, ಮೊಹಮ್ಮದ್ ಹನೀಫ್ ಸೇರಿದಂತೆ ನಾಲ್ವರು ಗಾಯಾಳುಗಳ ಕುಟುಂಬ ಸದಸ್ಯರಿಗೆ ಅವರು ಹಣ ಪಡೆಯಲು ನಿರಾಕರಿಸಿದ್ದರೂ ಸಹ ತಲಾ 50 ಸಾವಿರ ರೂಪಾಯಿ ನೀಡಿದ್ದರು. ಸಿದ್ದರಾಮಯ್ಯ ಅವರ ವಾಹನ ಚಲಿಸಲು ಆರಂಭಿಸಿದ ಬಳಿಕ ಹಿಂದೆ ಬಂದ ಗಾಯಾಳುವಿನ ಪತ್ನಿ ಹಣ ಬೇಕಿಲ್ಲ ಎಂದು ವಾಹನದತ್ತ ಹಣದ ಕಟ್ಟನ್ನು ಎಸೆದಿದ್ದಾರೆ.

“ನಮಗೆ ಹಣ ಬೇಕಿಲ್ಲ, ನ್ಯಾಯ ಬೇಕು. ಶಾಂತಿ ಕದಡುವ ಮತ್ತು ಹಿಂಸಾಚಾರಕ್ಕೆ ಕಾರಣವಾಗುವ ಕಿಡಿಗೇಡಿಗಳಿಗೆ ಶಿಕ್ಷೆಯಾಗಬೇಕು. ಸಮಾಜದಲ್ಲಿ ಶಾಂತಿ ನೆಲೆಸಬೇಕು’’ ಎಂದು ಸಿದ್ದರಾಮಯ್ಯ ವಾಹನದತ್ತ ಹಣ ಎಸೆದ ಮಹಿಳೆ ಹೇಳಿದ್ದಾರೆ.