ವಿಶ್ವಕರ್ಮ ಸಮಾಜ ಬಾಂಧವರಿಗಾಗಿ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಕೂಟ

ಉಡುಪಿ: ವಿಶ್ವಕರ್ಮ ಸಮಾಜ ಬಾಂಧವರಿಗಾಗಿ “ಭಾರ್ಗವ ಕ್ರಿಕೆಟರ್ಸ್ ಸಾಲಿಗ್ರಾಮ” ತಂಡದ ದಶಮಾನೋತ್ಸವದ ಪ್ರಯುಕ್ತ “ದಿವಂಗತ ಪಾರಂಪಳ್ಳಿ ವೆಂಕಟರಮಣ ಆಚಾರ್ಯ” ಸ್ಮರಣಾರ್ಥ ಫೆಬ್ರವರಿ 16 ಹಾಗೂ 17 ಶನಿವಾರ ಮತ್ತು ಭಾನುವಾರ ಸಾಲಿಗ್ರಾಮದ ಹಳೆಕೋಟೆ ಮೈದಾನದಲ್ಲಿ ವಿಶಿಷ್ಟ ಮಾದರಿಯ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಕೂಟವನ್ನು ಏರ್ಪಡಿಸಲಾಗಿದೆ. ದಕ್ಷಿಣಕನ್ನಡ ಹಾಗೂ ಉಡುಪಿ ಜಿಲ್ಲೆಯ 24 ತಂಡಗಳು ಭಾಗವಹಿಸಲಿದ್ದು, ರೋಚಕ ರೋಮಾಂಚಕಾರಿ ಹಣಾಹಣಿಗಿಳಿಯಲಿದೆ.

ವಿಶೇಷ ಆಕರ್ಷಣೆ ಎಂಬಂತೆ ವಿಶ್ವಕರ್ಮ ಪಂದ್ಯಾಕೂಟದಲ್ಲೇ ದಾಖಲೆ ಎಂಬಂತೆ ಅತೀ ಎತ್ತರ ಹಾಗೂ ಅಗಲದ ಆಕರ್ಷಕ ಟ್ರೋಫಿಗಳು,ಇದೇ ಮೊದಲ ಬಾರಿಗೆ ಅತ್ಯಂತ ಶಿಸ್ತಿನ ತಂಡಕ್ಕೆ ಟ್ರೋಫಿ ಹಾಗೂ ಇನ್ನಿತರ ಆಕರ್ಷಕ ವೈಯಕ್ತಿಕ ಪ್ರಶಸ್ತಿಯನ್ನು ನೀಡಿ ವಿಜೇತರನ್ನು ಪುರಸ್ಕರಿಸಲಾಗುವುದು. ರಾಜ್ಯದ ಶ್ರೇಷ್ಠ ಸ್ಮರಣಿಕೆ ತಯಾರಿಕಾ ಘಟಕವಾದ “ಮನೀಷ್ ಹ್ಯಾಂಡಿಕ್ರಾಫ್ಟ್ ಕೋಟ” ವಿಶಿಷ್ಟವಾಗಿ ಟ್ರೋಫಿಯನ್ನು ವಿನ್ಯಾಸಗೊಳಿಸಿದ್ದಾರೆ. ವಿಜೇತ ತಂಡ ಟ್ರೋಫಿಯ ಜೊತೆ 25,000 ನಗದು,
ರನ್ನರ್ಸ್ ತಂಡ 18000 ಹಾಗೂ ನಗದನ್ನು‌ ಪಡೆಯಲಿದ್ದಾರೆ.
ಆದಿತ್ಯವಾರ ನಡೆಯುವ ಸಮಾರೋಪ ಸಮಾರಂಭದಲ್ಲಿ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಸಮಾಜದ ಅಶಕ್ತರಿಗೆ ಧನ ಸಹಾಯ ಹಾಗೂ ಕ್ರೀಡಾ ಸಾಧಕರಿಗೆ ಸನ್ಮಾನಿಸಲಾಗುವುದು ಎಂದು ನಿನ್ನೆಯ ಪ್ರಶಸ್ತಿ ಅನಾವರಣ ಕಾರ್ಯಕ್ರಮದಲ್ಲಿ ಪ್ರಕಟಿಸಲಾಯಿತು. ಗೌರವಾಧ್ಯಕ್ಷರಾದ ಸುಬ್ರಾಯ ಆಚಾರ್ ಮಣೂರು, ಅಧ್ಯಕ್ಷರಾದ ವೆಂಕಟೇಶ ಆಚಾರ್ಯ, ನಾಗರಾಜ್ ಆಚಾರ್ಯ ಪಾರಂಪಳ್ಳಿ , ಖ್ಯಾತ ವೀಕ್ಷಕ ವಿವರಣೆಕಾರ ಕೋಟ ಶಿವನಾರಾಯಣ್ ಐತಾಳ್ ಹಾಗೂ  ಇನ್ನಿತರರು ಉಪಸ್ಥಿತರಿದ್ದರು.