ಛತ್ತೀಸ್‌ಗಢದ ಮೊದಲ ಬುಡಕಟ್ಟು ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಆಯ್ಕೆ: ಮಧ್ಯಪ್ರದೇಶ ಹಾಗೂ ರಾಜಸ್ಥಾನ ಮು.ಮಂ. ಘೋಷಣೆ ಶೀಘ್ರ

ನವದೆಹಲಿ: ಭಾರತೀಯ ಜನತಾ ಪಕ್ಷದ (ಬಿಜೆಪಿ) ವೀಕ್ಷಕರು ಮಧ್ಯಪ್ರದೇಶದ ಭೋಪಾಲ್‌ಗೆ ತಲುಪಿದ್ದು, ವಿಧಾನಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿನ ನಂತರ ರಾಜ್ಯಕ್ಕೆ ಮುಖ್ಯಮಂತ್ರಿ ಹೆಸರನ್ನು ನಿರ್ಧರಿಸಲು ಸಭೆ ನಡೆಯಲಿದೆ. ರಾಜಸ್ಥಾನ ಸಿಎಂ ಬಗ್ಗೆಯೂ ಕುತೂಹಲ ಮುಂದುವರಿದಿದ್ದು, ನಾಳೆ ಬಿಜೆಪಿ ಸಭೆ ನಡೆಯಲಿದೆ.

ಮಧ್ಯಪ್ರದೇಶದ ಬಿಜೆಪಿ ವೀಕ್ಷಕರು, ಹರಿಯಾಣ ಸಿಎಂ ಮನೋಹರ್ ಲಾಲ್ ಖಟ್ಟರ್ ಮತ್ತು ಬಿಜೆಪಿ ಸಂಸದ ಕೆ ಲಕ್ಷ್ಮಣ್ ಅವರು ಭೋಪಾಲ್‌ನಲ್ಲಿರುವ ಮುಖ್ಯಮಂತ್ರಿ ನಿವಾಸಕ್ಕೆ ಆಗಮಿಸಿದರು. ಅವರನ್ನು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಬರಮಾಡಿಕೊಂಡರು.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಾಜ್ಯಸಭಾ ಸಂಸದ ಸರೋಜ್ ಪಾಂಡೆ ಮತ್ತು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ವಿನೋದ್ ತಾವ್ಡೆ ಮಂಗಳವಾರದಂದು ಜೈಪುರ ತಲುಪಲಿದ್ದಾರೆ ಎಂದು ವರದಿಯಾಗಿದೆ.

ಏತನ್ಮಧ್ಯೆ, ವಿಷ್ಣು ದೇವ್ ಸಾಯಿ ಅವರನ್ನು ಛತ್ತೀಸ್‌ಗಢದ ಮುಖ್ಯಮಂತ್ರಿ ಎಂದು ಪಕ್ಷವು ಭಾನುವಾರ ಘೋಷಿಸಿದೆ. ಮಾಜಿ ಸಿಎಂ ಅಮಿತ್ ಜೋಗಿ ನಂತರ ರಾಜ್ಯದ ಮೊದಲ ಬುಡಕಟ್ಟು ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಆಯ್ಕೆಯಾಗಿದ್ದಾರೆ.

ಕ್ರಿಶ್ಚಿಯನ್ ಮತಕ್ಕೆ ಮತಾಂತರ ಹೊಂದಿದವರನ್ನು ಮರಳಿ ಹಿಂದೂ ಧರ್ಮಕ್ಕೆ ಪರಿವರ್ತಿಸುವ ‘ಘರ್ ವಾಪ್ಸಿ’ ಅಭಿಯಾನ ನಡೆಸುವ ಖ್ಯಾತಿ ಹೊಂದಿರುವ ಆರ್.ಎಸ್.ಎಸ್ ಕಟ್ಟಾಳು ಅರುವತ್ತು ವರ್ಷದ ವಿಷ್ಣು ದೇವ್ ಸಾಯಿ ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.