ಮಾನವೀಯತೆ ಮೆರೆದ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ: ಕಾರ್ಕಳದ 13 ಯುವಕರಿಗೆ ವಸತಿ ಸೌಲಭ್ಯ

ವಿಜಯಪುರ: ಮಾ 30: ಮಹಾರಾಷ್ಟ್ರದ ಭಾರಾಮತಿಯಿಂದ ಉಡುಪಿ ಜಿಲ್ಲೆಗೆ ತೆರಳುತ್ತಿದ್ದ 13 ಯುವಕರು ವಸತಿ ಮತ್ತು ಊಟದ ಸೌಕರ್ಯವಿಲ್ಲದೆ ಲಾಕ್‍ಡೌನ್ ಜಾರಿಯಿಂದ ನಗರದಲ್ಲಿ ಸಿಲುಕಿಕೊಂಡಿದ್ದ ಕಾರ್ಕಳದ 13 ಯುವಕರಿಗೆ ವಸತಿ ಸೌಲಭ್ಯ ಕಲ್ಪಿಸಿ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ಮಾನವಿಯತೆ ಮೆರೆದಿದ್ದಾರೆ.
ಇಂದು ನಗರದ ಇಟಗಿ ಪೆಟ್ರೋಲ್‍ಪಂಪ್, ಆಕಾಶವಾಣಿ ಕೇಂದ್ರ, ಸಾಯಿಪಾರ್ಕ, ಹಮಾಲಕಾಲನಿ ಸೇರಿದಂತೆ ವಿವಿಧ ಕಡೆ ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ್, ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಅಲೆಮಾರಿ ಜನಾಂಗಗಳ ಊಟೋಪಹಾರದ ಸೌಲಭ್ಯ, ವಸತಿ ಸೌಲಭ್ಯದ ಬಗ್ಗೆ ಪರಿಶೀಲನೆ ಹಾಗೂ ನಿಷೇದಾಜ್ಞೆ ಮತ್ತು ಲಾಕ್‍ಡೌನ್ ಕುರಿತು ಪರಿಶೀಲನೆ ನಡೆಸಿದರು.
ಮಹಾರಾಷ್ಟ್ರದ ಭಾರಾಮತಿಯಿಂದ ಉಡುಪಿ ಜಿಲ್ಲೆಯ ಕಾರ್ಕಳಕ್ಕೆ ತೆರಳಬಯಸಿದ್ದ 13 ಯುವಕರು ಊಟ-ವಸತಿಯಿಲ್ಲದೆ ನಿರ್ಗತಿಕರಾಗಿ ನಗರದಲ್ಲಿ ಅತಂತ್ರ ಸ್ಥತಿಯಲ್ಲಿರುವ ಬಗ್ಗೆ ಗಮನಿಸಿದ ಜಿಲ್ಲಾಧಿಕಾರಿಗಳು ತಕ್ಷಣ ಈಎಲ್ಲ ಯುವಕರ ಆರೋಗ್ಯ ತಪಾಸಣೆಗೆ ಸೂಚಿಸಿ ನಗರದ ಕಾಕಾ ಕಾರ್ಖಾನಿಸ್ ಕಲ್ಯಾಣ ಮಂಟಪದಲ್ಲಿ ವಾಸ್ಥವ್ಯಕ್ಕೆ ವ್ಯವಸ್ಥೆ ಕಲ್ಪಿಸುವುದರ ಜೊತೆಗೆ ಉಪಹಾರ ವ್ಯವಸ್ಥೆ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರ ಪರಿವೀಕ್ಷಣೆ ಅಂಗವಾಗಿ ಬೀದಿಮೇಲೆ ಅಲೆಯುತ್ತಿದ್ದ ಅಲೇಮಾರಿ ಜನಾಂಗದ ಮಹಿಳೆಯರು, ಮಕ್ಕಳಿಗೆ ವಸತಿ ಸೌಲಭ್ಯ ಕಲ್ಪಿಸುವ ಕುರಿತು ಕ್ರಮಕೈಗೊಳ್ಳಲು ಮಹಾನಗರ ಪಾಲಿಕೆ ಆಯುಕ್ತರಿಗೆ ಸೂಚಿಸಿದರು. ಅದರಂತೆ ಹಮಾಲ್ ಕಾಲೋನಿಯಲ್ಲಿ ಸೂಮಾರು 100 ಕ್ಕೂ ಹೆಚ್ಚು ಅಲೇಮಾರಿ ಜನಾಂಗದ ಜನರು ನೆಲೆಯೂರಿರುವ ಬಗ್ಗೆ ಗಮನಿಸಿ ನಾಳೆ ಬೆಳಿಗ್ಗೆಯಿಂದ ಅಕ್ಕಿ, ಗೋಧಿಹಿಟ್ಟು, ಬೆಳೆಕಾಳು ಸೇರಿದಂತೆ ಅಗತ್ಯ ವಸ್ತುಗಳ ಸೌಲಭ್ಯ ಕಲ್ಪಿಸುವಂತೆ ಆಹಾರ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪೊಲೀಸ ವರಿಷ್ಠಾಧಿಕಾರಿ ಅನುಪಮ ಅಗರವಾಲ ಅವರು ಜಿಲ್ಲಾದ್ಯಂತ ಲಾಕ್‍ಡೌನ್ ಆದೇಶ ಜಾರಿಯಲ್ಲಿದ್ದು,  ಇದನ್ನು ಉಲ್ಲಂಘಿಸದಂತೆ, ಬೇರೆ ಜಿಲ್ಲೆಗಳಿಗೆ ಪ್ರಯಾಣ ಬೆಳೆಸದಿರುವಂತೆ ಈ ಎಲ್ಲಾ ನಿರಾಶ್ರಿತರಿಗೆ ಸಲಹೆ ನೀಡಿ ಕೋವಿಡ್-19 ಅಪಾಯಕಾರಿ ವೈರಾಣು ವಿವಿದೆಡೆ ಹರಡುತ್ತಿರುವುದರಿಂದ ಅವಶ್ಯಕ ಮುನ್ನೆಚ್ಚರಿಕೆ ಕೈಗೊಳ್ಳಲು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಇದ್ದರು.