ಉತ್ತರಾಧಿಕಾರಿಯಾಗಿ ಶ್ರೇಷ್ಠ  ವಟು  ದೊರಕಿದ್ದಾನೆ: ಪಲಿಮಾರು ಶ್ರೀ

ಉಡುಪಿ: ನಮಗೆ ಗುರುಗಳು ನೀಡಿದ ಭಾಗ್ಯ ಎರಡು ಒಂದು ಸನ್ಯಾಸ ಮತ್ತೊಂದು ಶ್ರೀ ಕೃಷ್ಣ ದೇವರು, ಶ್ರೀ ರಾಮ ದೇವರ ಪೂಜೆಯೊಂದಿಗೆ ಪಾಠಪ್ರವಚನ. ಇದು ನಿರಂತರವಾಗಿ ಬೆಳೆಯ ಬೇಕು ಮತ್ತು ಬೆಳಸಬೇಕು ಎಂದು ಉಡುಪಿಯ ಪಲಿಮಾರು ಶ್ರೀಗಳು ಹೇಳಿದ್ದಾರೆ.
‌ಅವರು ಬುಧವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಸನ್ಯಾಸ ಎಂದರೆ ಕೇವಲ ಕಾಷಾಯ ವಸ್ತ್ರ ಬದಲಾವಣೆಯಲ್ಲ ಮಾನಸಿಕವಾದ ಪಕ್ವಾತೆಯೊಂದಿಗೆ ಪೂರ್ಣ ವಿರಕ್ತಿ ಭಾವ. ಅದು ಇದ್ದಲ್ಲಿ ಮಾತ್ರ ಸನ್ಯಾಸಕ್ಕೆ ಅರ್ಥವಿದೆ. ಇಂತಹ ಸನ್ಯಾಸದಿಂದಲೇ ಭಗವಂತನನ್ನು ಒಲಿಸಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ನಮ್ಮ ಗುರುಗಳು ಹಾಗೂ ಪೂರ್ವಾಚಾರ್ಯರು ನೀಡಿದ ಈ ಜ್ಞಾನ ಸಂತತಿಯನ್ನು ಬೆಳೆಸುವ ದೃಷ್ಟಿಯಿಂದ ಯೋಗ್ಯ ವಟುವಿನ ನಿರೀಕ್ಷೆಯಲ್ಲಿದ್ದಾಗ ಶ್ರೀ ರಾಮ ಕೃಷ್ಣ ದೇವರ, ಅನಂತಾಸನ ದೇವರ ಅನುಗ್ರಹದಿಂದ ಶ್ರೀ ಮುಖ್ಯಪ್ರಾಣ ದೇವರ ಶ್ರೀ ಮಧ್ವಾಚಾರ್ಯರ ದಯೆಯಿಂದ ಪಲಿಮಾರಿನ ನಮ್ಮ ಯೋಗದೀಪಿಕಾ ವಿದ್ಯಾಪೀಠದಲ್ಲಿ ಅಧ್ಯಯನ ಮಾಡುತ್ತಿರುವ  ವಟು ದೊರಕಿದ್ದಾನೆ ಎಂದರು. ಮೊದಲಿನಿಂದಲೂ ಆಧ್ಯಾತ್ಮಿಕ ಸಾಧನೆಯಲ್ಲಿ ನಿಷ್ಠೆ ಶುದ್ಧ ಸದಾಚಾರದಿಂದ ಕೂಡಿದ ಹಾಗೂ ವಿಶೇಷವಾಗಿ ಸಹಜವಾಗಿ ಸನ್ಯಾಸದ ಬಗ್ಗೆ ಆಸಕ್ತಿಯಿದ್ದ ಶೈಲೇಶ ಉಪಾಧ್ಯಾಯ ಎಂಬ ವಿದ್ಯಾರ್ಥಿಯನ್ನು ಗುರುತಿಸಿ ಅವನ ತಂದೆ ತಾಯಿಗಳಾದ ಕೊಡವೂರು ಕಂಬ್ಲಕಟ್ಟ ನಿವಾಸಿಗಳಾದ ವೇದಮೂರ್ತಿ ಶ್ರೀ ಸುರೇಂದ್ರ ಉಪಾಧ್ಯಾಯ ಹಾಗೂ ಶ್ರೀಮತಿ ಲಕ್ಷ್ಮೀ ಸುರೇಂದ್ರ ಉಪಾಧ್ಯಾಯ ದಂಪತಿಗಳನ್ನು ಸಂಪರ್ಕಿಸಿ ,ಸಿದ್ಧ ಜ್ಯೋತಿಷಿಗಳ ಬಳಿ ವಟುವಿನ ಜಾತಕದ ಚಿಂತನೆಯನ್ನು ನಡೆಸಿ ಅವರ ಕುಟುಂಬದ ಸದಸ್ಯರ ಪೂರ್ಣ ಸಮ್ಮತಿಯೊಂದಿಗೆ ಶೈಲೇಶ ಉಪಾಧ್ಯಾಯ ಎಂಬ ವಟುವನ್ನು ನಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಲು ನಿರ್ಣಯಿಸಿದ್ದೇವೆ ಎಂದವರು ತಿಳಿಸಿದರು.