ಹಿರಿಯಡಕ: ಇಲಿ ಪಾಷಾಣ ಬೆರೆಸಿಟ್ಟಿದ್ದ ಪಪ್ಪಾಯಿ ಹಣ್ಣುತಿಂದು ಮಹಿಳೆ ಸಾವು

ಉಡುಪಿ: ಇಲಿಗಳ ಹಾವಳಿ ತಡೆಯಲು ಪಪ್ಪಾಯಿ ಹಣ್ಣಿನಲ್ಲಿ ಬೆರೆಸಿಟ್ಟಿದ್ದ ಇಲಿ ಪಾಷಾಣ ತಿಂದು ಮಹಿಳೆಯೊಬ್ಬರು ಮೃತಪಟ್ಟ ಘಟನೆ ಕುದಿ ಗ್ರಾಮದ ದೇವರಗುಂಡದಲ್ಲಿ ನಡೆದಿದೆ.

ಮೃತಪಟ್ಟ ಮಹಿಳೆಯನ್ನು ಉಡುಪಿ ಕುದಿ ಗ್ರಾಮದ ದೇವರಗುಂಡ ನಿವಾಸಿ ಶ್ರೀಮತಿ (43) ಎಂದು ಗುರುತಿಸಲಾಗಿದೆ. ಮಹಿಳೆಯ ಮನೆಯ ಹಿಂಬದಿಯಲ್ಲಿ ಗೇರುಬೀಜ ಕಾರ್ಖಾನೆ ಇದ್ದು, ಅಲ್ಲಿ ಇಲಿಯ ನಿಯಂತ್ರಣಕ್ಕಾಗಿ ಪಪ್ಪಾಯಿ ಹಣ್ಣಿನಲ್ಲಿ ಇಲಿ ಪಾಷಾಣ ಇಟ್ಟಿದ್ದರು.

ಅ. 19ರಂದು ಶ್ರೀಮತಿ ಅವರು ಕಣ್ತಪ್ಪಿನಿಂದ ಈ ಹಣ್ಣನ್ನು ತಿಂದಿದ್ದು, ಮರುದಿನ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿತ್ತು. ಹೀಗಾಗಿ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಾಪ್ಪಿದ್ದಾರೆ. ಹಿರಿಯಡಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.