ಕಾರ್ಕಳ : ಆನ್ ಲೈನ್ ದೇವರ ದರ್ಶನ, ಆನ್ ಲೈನ್ ಮಹಾಪೂಜೆ ಅಂತೆಲ್ಲಾ ನೀವು ಕೇಳಿರುತ್ತೀರಿ, ಮುಜುರಾಯಿ ಇಲಾಖೆಯ ಅಧೀನದಲ್ಲಿರುವ ದೇವಸ್ಥಾನಗಳಲ್ಲಿ ದೇವರ ಪೂಜಾ ಕಾರ್ಯಕ್ರಮಗಳನ್ನು ಆನ್ ಲೈನ್ ಮೂಲಕ ನಡೆಸುವ ಬಗ್ಗೆ ಸರ್ಕಾರ ಪ್ರಸ್ತಾಪಿಸಿದ ಬೆನ್ನಲ್ಲೇ ಕೆಲವೊಂದು ಕಡೆ ಆನ್ ಲೈನ್ ದೇವತಾ ದರ್ಶನಕ್ಕೆ ಮುಂದಾಗಿರುವುದು ಹಳೆ ಸುದ್ದಿ. ಆದರೆ ಉಡುಪಿ ಜಿಲ್ಲೆಯ ಕಾರ್ಕಳದ ಪುರೋಹಿತರೊಬ್ಬರು ಆನ್ ಲೈನ್ ನಲ್ಲೇ ತಿಥಿ ಕಾರ್ಯ ಮಾಡಿ ಮುಗಿಸಿದ ಮುಗಿಸಿರುವುದು ಹೊಸ ಸುದ್ದಿ.
ಯಸ್. ಇಂತಹ ಅಪರೂಪದ ಆನ್ ಲೈನ್ ತಿಥಿಯೊಂದು ಶನಿವಾರ ನಡೆದಿದ್ದು. ಕೊರೋನಾದ ಈ ದುರಿತ ಕಾಲದಲ್ಲಿ ಈ ಆನ್ ಲೈನ್ ಅನಿವಾರ್ಯವಾದರೂ ಇದೀಗ ಗಮನ ಸೆಳೆದಿದೆ.
ಒಂದು ಕಡೆ ಲಾಕ್ ಡೌನ್ ಸೆಕ್ಷನ್ 144 ಜಾರಿಯಲ್ಲಿರುವುದರಿಂದ ಯಾವುದೇ ಕಾರ್ಯಕ್ರಮ ನಡೆಸುವಂತಿಲ್ಲ ಮತ್ತೊಂದು ಕಡೆ ಪುರೋಹಿತರು ಸಿಗುತ್ತಿಲ್ಲ ಎನ್ನುವುದು ಬಹಳಷ್ಟು ಮಂದಿಗೆ ತಲೆನೋವಾಗಿದ್ದರೂ.ಇದೀಗ ಆನ್ ಲೈನ್ ನಲ್ಲಿ ತಿಥಿ ಅನ್ನೋ ಯೋಜನೆ ಕೆಲವರನ್ನು ನಿರಾಳವಾಗಿಸಿದೆ.
ದೈವಾಧೀನರಾದವರಿಗೆ ಶ್ರಾದ್ಧ, ಕ್ರಿಯೆ, ಪಿಂಡ ತರ್ಪಣ, ನೀಡುವುದಾರೆ ಹೇಗೆ ? ಎನ್ನುವ ಚಿಂತೆಯಲ್ಲಿ ಸಿಲುಕಿದ್ದ ಕಾರ್ಕಳದ ಕುಟುಂಬವೊಂದು ಪುರೋಹಿತರ ಜೊತೆ ನೇರ ಸಂಪರ್ಕದಲ್ಲಿದ್ದು ಕೊನೆಗೆ ಅವರ ಸಲಹೆಯಂತೆ ಆನ್ ಲೈನ್ ನಲ್ಲಿಯೇ ವಿಡಿಯೋ ಮಾಡುವ ಮೂಲಕ ಈ ಬಾರಿ ತಿಥಿ ಕಾರ್ಯವನ್ನು ನೇರವೇರಿಸಿ ಅದನ್ನು ಕಣ್ತುಂಬಿಕೊಂಡು ತೃಪ್ತಿ ಪಟ್ಟುಕೊಂಡಿದ್ದಾರೆ.
ಕಾರ್ಕಳ ಪೇಟೆಯ ಮಲ್ಲಿಗೆ ಓಣಿಯ ನಿವಾಸಿ ಪುರೋಹಿತರಾದ ಸುರೇಂದ್ರ ಭಟ್ ಮಸ್ಕತ್ ನಿಂದ ಸಚಿತ್ ಕಾಮತ್ ಅವರ ತಂದೆಯ ವಾರ್ಷಿಕ ಶ್ರಾದ್ಧವನ್ನು ಆನ್ ಲೈನ್ ಲೈವ್ ವಿಡಿಯೋ ಮೂಲಕ ಮಾಡಿದವರು. ಇತ್ತೀಚಿಗೆ ನಿಧನರಾದ ಶಾಂತಾ ನಾಗೇಶ್ ಪೈ ಎಂಬುವರ ಮಗ ಮುಂಬೈಯಲ್ಲಿದ್ದು ಊರಿಗೆ ಆಗಮಿಸಲಾಗದ ಹಿನ್ನಲೆಯಲ್ಲಿ ಇದೇ ಆನ್ ಲೈನ್ ಲೈವ್ ವಿಡಿಯೋ ಮೂಲಕ ಮಗನಿಗೆ ತಾಯಿಯ ಶವಸಂಸ್ಕಾರದ ವಿಡಿಯೋ ಹಾಗೂ ಒಂಬತ್ತನೇ ದಿನದ ಕ್ರಿಯೆಯನ್ನೂ ಆನ್ ಲೈನ್ ನಲ್ಲಿ ನೇರವೆರಿಸಿ ಕೊಡುವ ಮೂಲಕ ಸುರೇಂದ್ರ ಭಟ್ ಅವರು ಭಾರಿ ಸುದ್ದಿಯಾಗಿದ್ದಾರೆ. ಅಂತೂ ಕೊರೋನಾದಿಂದಾಗಿ ಆನ್ ಲೈನ್ ತಿಥಿ ಮತ್ತು ಶವಸಂಸ್ಕಾರ ಆಚರಣೆ ಅನ್ನೋ ಹೊಸ ಕಾನ್ಸೆಪ್ಟ್ ಕೂಡ ಮುನ್ನೆಲೆಗೆ ಬಂದಿರುವುದು ವಿಶೇಷ