ಉಡುಪಿ: ಉಡುಪಿಯಲ್ಲಿ ನಾರಿ ಶಕ್ತಿ ಫೋರಂ ನವರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಪ್ರತಿಭಟನೆಯಲ್ಲಿ ನಾರಿ ಶಕ್ತಿ ವಂದನ ಅಧಿನಿಯಮವನ್ನು ಜಾರಿಯಾಗದಂತೆ ತಡೆಹಿಡಿದ ಕೇಂದ್ರದ ವಿಪಕ್ಷಗಳ ವಿರುದ್ಧ ಆಕ್ರೋಶವ್ಯಕ್ತಪಡಿಸಲಾಯಿತು.
ಮಹಿಳಾ ಮೀಸಲಾತಿ ಮಸೂದೆಯನ್ನು ವಿರೋಧಿಸಿರುವುದು ಮಹಿಳಾ ವಿರೋಧಿ ನಿಲುವಾಗಿದೆ. ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ದೇಶದ ಮಹಿಳೆಯರಿಗೆ ಅನ್ಯಾಯ ಮಾಡಿವೆ. ಕೇವಲ ಬಿಜೆಪಿ ಬೆಂಬಲಿತ ಮಹಿಳೆಯರು ಮಾತ್ರವಲ್ಲ ಸಾರ್ವಜನಿಕವಾಗಿ ವಿಪಕ್ಷಗಳ ಈ ನಿಲುವನ್ನು ವಿರೋಧಿಸಬೇಕು.

ಕಾಂಗ್ರೆಸ್ ಪಕ್ಷದ ಮಹಿಳೆಯರು ಕೂಡ ನಮ್ಮನ್ನು ಬೆಂಬಲಿಸಬೇಕು ಎಂದು ಪ್ರತಿಭಟನಾ ನಿರತ ಮಹಿಳೆಯರು ಕಿಡಿಕಾರಿದರು. ಮಹಿಳೆಯರನ್ನು ಕೇವಲ ಕೈಯಲ್ಲಿ ಪ್ಯಾಂಪ್ಲೆಟ್ ಕೊಟ್ಟು ಪ್ರಚಾರಕ್ಕೆ ಮಾತ್ರ ಬಳಸಿಕೊಳ್ಳಲಾಗುತ್ತದೆ.

ಅಧಿಕಾರ ನೀಡುವ ಮನಸ್ಸು ಕಾಂಗ್ರೆಸ್ ಗೆ ಇಲ್ಲ. ಇದು ಗುಲಾಮ ಸಂಸ್ಕೃತಿಯ ಪ್ರತೀಕ ಎಂದು ಟೀಕಿಸಿದರು. ನಮ್ಮ ಸಂಸ್ಕೃತಿ ಹೆಣ್ಣಿಗೆ ದೇವತೆಯ ಸ್ಥಾನಮಾನ ನೀಡಿದೆ, ಮಸೂದೆ ವಿರೋಧಿಸಿದವರು ಹೆಣ್ಣು ಮಕ್ಕಳಿಗೆ ಅವಮಾನ ಮಾಡಿದ್ದಾರೆ ಎಂದು ದೂರಿದರು.

















