ಉಡುಪಿಗೆ ಮತ್ತೆ ಮುಂಬೈ ಆಘಾತ: ಮುಂಬೈನಿಂದ ಬಂದಿರುವ ಆರು ಮಂದಿಯಲ್ಲಿ ಕೊರೊನಾ ಸೋಂಕು

ಉಡುಪಿ: ಉಡುಪಿ ಜಿಲ್ಲೆಗೆ ಮುಂಬೈ ನಂಟು ಮತ್ತಷ್ಟು ಆಘಾತ ನೀಡಿದ್ದು, ಮುಂಬೈನಿಂದ ಆಗಮಿಸಿ ಕ್ವಾರಂಟೈನ್ ನಲ್ಲಿದ್ದ ಆರು ಮಂದಿಯಲ್ಲಿ ಇಂದು ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಜಿ. ಜಗದೀಶ್ ತಿಳಿಸಿದ್ದಾರೆ.
ವಿಡಿಯೋ ಹೇಳಿಕೆ ಬಿಡುಗಡೆ ಮಾಹಿತಿ ನೀಡಿದ ಅವರು, ಮೇ 14ರಂದು ಕೆಎಂಸಿ ಆಸ್ಪತ್ರೆಯಲ್ಲಿ ಮೃತಪಟ್ಟ ಸೋಂಕಿತನ ಸಂಪರ್ಕದಲ್ಲಿದ್ದ 44 ವರ್ಷದ ಮಹಿಳೆ ಹಾಗೂ 15 ವರ್ಷದ ಬಾಲಕಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರು ಮೃತಪಟ್ಟ ಸೋಂಕಿತನೊಂದಿಗೆ ಮುಂಬೈನಿಂದ ಒಟ್ಟಿಗೆ ಪ್ರಯಾಣ ಬೆಳೆಸಿದ್ದರು. ಹಾಗೆ ಮುಂಬೈನಿಂದ ಬಂದು ಹೆಬ್ರಿಯಲ್ಲಿ ಕ್ವಾರಂಟೈನ್ ನಲ್ಲಿದ್ದ 31 ವರ್ಷದ ಮಹಿಳೆ ಹಾಗೂ 47 ವರ್ಷದ ಮಹಿಳೆಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಹೇಳಿದರು.
ಮುಂಬೈನಿಂದ ಬಂದು ಬೈಂದೂರು ತಾಲ್ಲೂಕಿನಲ್ಲಿ ಕ್ವಾರಂಟೈನ್ ನಲ್ಲಿದ್ದ 55 ವರ್ಷದ ಪುರುಷ ಹಾಗೂ 74 ವರ್ಷದ ವೃದ್ಧನಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಎಲ್ಲ ಸೋಂಕಿತರನ್ನು ನಗರದ ಡಾ. ಟಿಎಂಎ ಪೈ ಕೋವಿಡ್ ಆಸ್ಪತ್ರೆಯ ಐಸೋಲೇಷನ್ ವಾರ್ಡ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.