ರಂಗಭೂಮಿಯ ಶಕ್ತಿ ಬಲವರ್ದಿಸುವ ಜವಾಬ್ದಾರಿ ಸಂಘಟನೆ ಮೇಲಿದೆ: ಟಿ.ರಂಗ ಪೈ

ಉಡುಪಿ: ಪ್ರಸ್ತುತ ಯುವಜನರನ್ನು ರಂಗಭೂಮಿಯತ್ತಾ ಆಕರ್ಷಿಸುವ ಸಂಘಟನೆಗಳು ಕಡಿಮೆಯಾಗಿವೆ. ಅಲ್ಲದೆ, ನಾಟಕ ಕಲಿಯಲು ಯುವ ಮನಸ್ಸುಗಳು ಮುಂದಾಗುತ್ತಿಲ್ಲ. ಇದು ರಂಗಭೂಮಿಯ ಬೆಳವಣಿಗೆಗೆ ತೊಡಕಾಗಿದೆ. ಈ ಸಣ್ಣ ನ್ಯೂನತೆಗಳನ್ನು ಸರಿಪಡಿಸಿ, ರಂಗಭೂಮಿಯ ಶಕ್ತಿಯನ್ನು ಬಲವರ್ಧಿಸುವ ಜವಾಬ್ದಾರಿ ಸಂಘಟನೆಯ ಮೇಲಿದೆ ಎಂದರು ಹಿರಿಯ ಸಂಗೀತ ವಿದ್ವಾಂಸ ಟಿ. ರಂಗ ಪೈ ಹೇಳಿದರು.
ರಂಗಭೂಮಿ ಉಡುಪಿ ಹಾಗೂ ರಂಗಾಯಣ ಶಿವಮೊಗ್ಗ ಇದರ ಸಂಯುಕ್ತ ಆಶ್ರಯದಲ್ಲಿ ನಗರದ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಮಂಗಳವಾರ ಆಯೋಜಿಸಿರುವ ಮೂರು ದಿನಗಳ ‘ರಂಗತೇರು’ ನಾಟಕೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ರಂಗಭೂಮಿಗೆ ಮನಸ್ಸು ಉದ್ದೀಪನಗೊಳಿಸುವ ಶಕ್ತಿಯಿದೆ. ಮನೋರಂಜನೆ ನೀಡುವುದೇ ಎಲ್ಲ ಕಲೆಗಳ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ನಾಟಕೋತ್ಸವಕ್ಕೆ ಚಾಲನೆ ನೀಡಿ ಉದಯಕುಮಾರ್‌ ಶೆಟ್ಟಿ ಫ್ಯಾಮಿಲಿ ಟ್ರಸ್ಟ್‌ ಪ್ರವರ್ತಕ ಕೆ. ಉದಯಕುಮಾರ್‌ ಶೆಟ್ಟಿ ಮಾತನಾಡಿ, ರಂಗಭೂಮಿ ಬೆಳವಣಿಗೆಯ ನಿಟ್ಟಿನಲ್ಲಿ ಉಡುಪಿ ರಂಗಭೂಮಿ ಸಂಘಟನೆ ನಡೆಸುತ್ತಿರುವ ಕಾರ್ಯ ಮಾದರಿಯಾಗಿದ್ದು, ಉಡುಪಿ ರಂಗಭೂಮಿ ಇಡೀ ಕರ್ನಾಟಕಕ್ಕೆ ಹೆಮ್ಮೆಯ ವಿಚಾರವಾಗಿದೆ ಎಂದರು.
ರಂಗಭೂಮಿ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಎಂ. ನಂದಕುಮಾರ್‌ ಸ್ವಾಗತಿಸಿದರು. ಜಂಟಿ ಕಾರ್ಯದರ್ಶಿ ಎಚ್‌.ಪಿ. ರವಿರಾಜ್‌ ಕಾರ್ಯಕ್ರಮ ನಿರೂಪಿಸಿದರು.