ಕೆಲವೇ ದಿನಗಳೊಳಗೆ ಭಕ್ತರಿಗೆ ಕೃಷ್ಣನ ದರ್ಶನಕ್ಕೆ ಅವಕಾಶ: ಅದಮಾರು ಶ್ರೀ

ಉಡುಪಿ: ಕೃಷ್ಣಮಠದಲ್ಲಿ ಮುಂದಿನ ಕೆಲವೇ ದಿನಗಳೊಳಗೆ ಭಕ್ತರಿಗೆ ಕೃಷ್ಣನ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯತೀರ್ಥ ಶ್ರೀಪಾದರು ತಿಳಿಸಿದ್ದಾರೆ.
ಗೌರಿ ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಇಂದು ಸಂದೇಶ ನೀಡಿದರು.
ದೇಶವು ಕೊರೊನಾ ಸಂಕಟದಿಂದ ಆದಷ್ಟು ಬೇಗ ಮುಕ್ತವಾಗಲಿದ್ದು, ಜನರ ಸಂಕಷ್ಟಗಳು ದೂರ ಆಗಲಿದೆ. ಹಾಗೆ ಮುಂದಿನ ದಿನಗಳಲ್ಲಿ ಭಕ್ತರಿಗೆ ಕೃಷ್ಣ ದರ್ಶನಕ್ಕೂ ಅವಕಾಶ ಮಾಡಿಕೊಡಲಾಗುವುದು ಎಂದರು.
ಸದ್ಯ ಕನಕನ ಕಿಂಡಿಯ ಮೂಲಕ ಸಾರ್ವಜನಿಕರಿಗೆ ಕೃಷ್ಣನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದರು.
ಉಡುಪಿ ಕೃಷ್ಣಮಠದಲ್ಲಿ ಸಂಪ್ರದಾಯದಂತೆ ಗಣಪತಿಯ ವಿಗ್ರಹ ಪ್ರತಿಷ್ಠಾಪಿಸಿ ಮೂರು ದಿನ ಪೂಜೆ ನಡೆಸಿ ಬಳಿಕ ಮಠದ ಸರೋವರದಲ್ಲಿ ವಿಸರ್ಜನೆ ಮಾಡಲಾಗುವುದು ಎಂದು ತಿಳಿಸಿದರು.