ಉಡುಪಿ: ಜಿಲ್ಲೆಯಲ್ಲಿ ಶೀಘ್ರವೇ ಬಿಜೆಪಿಯ ಸಾಂಸ್ಥಿಕ ಚುನಾವಣೆ: ಮಟ್ಟಾರ್

ಉಡುಪಿ: ಉಡುಪಿ ಜಿಲ್ಲೆಯ ಆರು ಮಂಡಲ ಹಾಗೂ ಐದು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೀಘ್ರವೇ ಬಿಜೆಪಿಯ ಸಾಂಸ್ಥಿಕ ಚುನಾವಣೆ ನಡೆಯಲಿದ್ದು, ಈಗಾಗಲೇ ಚುನಾವಣೆಗೆ ಸಂಬಂಧಿಸಿದಂತೆ ಬೂತ್‌ಮಟ್ಟದ ಸಮಿತಿ ರಚನೆ ಕಾರ್ಯ ಶೇ. 85ರಷ್ಟು ಪೂರ್ಣಗೊಂಡಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಶೇ. 95ರಷ್ಟು ಬೂತ್‌ ಸಮಿತಿ ರಚನೆ ಕಾರ್ಯ ಮುಗಿದಿದ್ದು, ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಉಳಿದಂತೆ ಅ. 10ರೊಳಗೆ ಸಮಿತಿ ರಚನೆ ಕಾರ್ಯ ಪೂರ್ಣಗೊಳಿಸಲಾಗುವುದು. ಬಳಿಕ ಮಂಡಲಗಳ ಸಮಿತಿ ರಚನೆ ಹಾಗೂ ಅಧ್ಯಕ್ಷರ ಚುನಾವಣೆ ನಡೆಯಲಿದೆ. ಆ ನಂತರ ಜಿಲ್ಲೆಯ ಚುನಾವಣೆ ಪ್ರಕ್ರಿಯೆ ಆರಂಭಗೊಳ್ಳಲಿದೆ ಎಂದರು.
ಗಾಂಧೀಜಿಯ 150ನೇ ಜನ್ಮದಿನಾಚರಣೆ ಪ್ರಯುಕ್ತ ಅ.2ರಿಂದ 30ರ ವರೆಗೆ ಸಂಸದರ ನೇತೃತ್ವದಲ್ಲಿ 15 ಕಿ.ಮೀ. ಕಾಲ್ನಾಡಿಗೆ ಅಭಿಯಾನ ಹಮ್ಮಿಕೊಂಡಿದ್ದು, ಈಗಾಗಲೇ ಈ ಅಭಿಯಾನಕ್ಕೆ ಕಾಪುವಿನಲ್ಲಿ ಚಾಲನೆ ನೀಡಲಾಗಿದೆ. ಅಭಿಯಾನದ ಜತೆಗೆ ಸ್ವಚ್ಛತೆ
ಕಾರ್ಯಕ್ರಮಕ್ಕೂ ಆದ್ಯತೆ ನೀಡಲಾಗಿದೆ ಎಂದರು.
ಕೇಂದ್ರದ ಎನ್‌ಡಿಆರ್‌ಎಫ್‌ ಯೋಜನೆಯಡಿ ರಾಜ್ಯಕ್ಕೆ 1200 ಕೋಟಿ ರೂ. ನೆರೆ ಪರಿಹಾರ ಬಿಡುಗಡೆಯಾಗಿದ್ದು, ಎರಡನೇ ಹಂತದಲ್ಲಿ ಸುಮಾರು ಮೂರು ಸಾವಿರ ಕೋಟಿ ಪರಿಹಾರ ಬಿಡುಗಡೆಯಾಗುವ ನಿರೀಕ್ಷೆ ಇದೆ. ಹಿಂದಿನ ಯುಪಿಎ ಸರ್ಕಾರ ನೆರೆಯಿಂದ ಆಗಿರುವ ನಷ್ಟವನ್ನು ಅಧ್ಯಯನ ಮಾಡಿ ನೀಡುವ ವರದಿಯ ಆಧಾರದ ಮೇಲೆ ಪರಿಹಾರ ನೀಡಬೇಕೆಂಬ ನಿಯಮಾವಳಿಯನ್ನು ರಚಿಸಿದೆ. ಆದ್ದರಿಂದ ನೆರೆ ಪರಿಹಾರ ನೀಡಲು ವಿಳಂಬವಾಗಿದೆ. ಅಲ್ಲದೆ ತುರ್ತಾಗಿ ನೆರೆ ಪರಿಹಾರ ನೀಡಲು ಈ ನಿಯಮಾವಳಿ ತೊಡಕಾಗಿದ್ದು, ಇದನ್ನು ಬದಲಾಯಿಸಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದರು.
ಜಿಲ್ಲೆಯಲ್ಲಿ ಉಂಟಾದ ಪ್ರಾಕೃತಿಕ ವಿಕೋಪಕ್ಕೆ 25 ಕೋಟಿ ರೂ. ಬಿಡುಗಡೆಯಾಗಿದೆ. ಆದರೆ ಪರಿಹಾರ ಬಿಡುಗಡೆ ಮಾಡುವಾಗ ರೈತರನ್ನು ಅಷ್ಟಾಗಿ ಪರಿಗಣಿಸಿಲ್ಲ. ಸಾಕಷ್ಟು ಭತ್ತದ ಬೆಳೆಗೆ ಹಾನಿಯಾಗಿದೆ. ತೆಂಗು, ಅಡಿಕೆ ಮೊದಲಾದ ತೋಟಗಾರಿಕಾ ಬೆಳೆಗಳಿಗೂ ಹಾನಿಯಾಗಿದೆ. ಆದ್ದರಿಂದ ಎಕರೆಗೆ 3ರಿಂದ 4 ಸಾವಿರ ರೂ ಪರಿಹಾರ ನೀಡಬೇಕು. ಹಾಗೆಯೇ ರೈತರಿಗೆ ಹೆಚ್ಚುವರಿ ಅನುದಾನ ಬಿಡಗಡೆ ಮಾಡಬೇಕು ಎಂದು ಅವರು ಒತ್ತಾಯಿಸಿದರು.
ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಮರಳು ಸಮಸ್ಯೆ ಬಗೆಹರಿದಿದೆ. ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಮರಳುಗಾರಿಕೆ ಆರಂಭವಾಗಿದ್ದು, ಜನರಿಗೆ ಕಡಿಮೆ ದರದಲ್ಲಿ ಸುಲಭವಾಗಿ ಮರಳು ಸಿಗುವಂತೆ ಮಾಡಲಾಗುವುದು. ಕುಂದಾಪುರ ವಿಭಾಗದ ನಾನ್‌ಸಿಆರ್‌ಝಡ್‌ ವ್ಯಾಪ್ತಿಯಲ್ಲಿ ಅ. 16ರಿಂದ ಮರಳುಗಾರಿಕೆಗೆ ಚಾಲನೆ ಸಿಗಲಿದೆ ಎಂದರು.
ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಯಶ್‌ಪಾಲ್‌ ಸುವರ್ಣ, ಪ್ರಭಾಕರ ಪೂಜಾರಿ, ಸಂಧ್ಯಾ ರಮೇಶ್‌, ರವಿ ಅಮೀನ್‌, ಗುರುಪ್ರಸಾದ್‌ ಶೆಟ್ಟಿ, ಶಿವಕುಮಾರ್‌ ಇದ್ದರು.