ಉಡುಪಿ ಜಿಲ್ಲೆಯ ಸಂಪೂರ್ಣ ಆಡಳಿತ ಈಗ ಮಹಿಳೆಯರ ಕೈಯ್ಯಲ್ಲಿ

ಉಡುಪಿ:ಉಡುಪಿ ಜಿಲ್ಲೆಯ ಸಂಪೂರ್ಣ ಆಡಳಿತ ಮಹಿಳೆಯರ ಕೈಯ್ಯಲ್ಲಿದೆ. ಉಡುಪಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆಯ ಸಂಪೂರ್ಣ ಹೊಣೆಗಾರಿಕೆ ಮಹಿಳಾ ಶಕ್ತಿಯ ಮೇಲೆ ನಿಂತಿದೆ. ಜಿಲ್ಲಾಧಿಕಾರಿ , ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ , ಜಿಲ್ಲಾ ಪಂಚಾಯತ್ ನ ಮುಖ್ಯಕಾರ್ಯ ನಿರ್ವಾಹಣಾಧಿಕಾರಿ ಸೇರಿದಂತೆ ಜಿಲ್ಲೆಯ ಆಡಳಿತ ಸೂತ್ರವೆಲ್ಲಾ ಮಹಿಳಾ ಮಣಿಗಳ ಕೈಯ್ಯಲ್ಲೇ ಇದೆ. ಹೌದು, ಉಡುಪಿ ಜಿಲ್ಲೆಯಲ್ಲೀಗ ಮಹಿಳಾ ಸಾಮ್ರಾಜ್ಯ. ಜಿಲ್ಲಾಧಿಕಾರಿ , ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಪಂಚಾಯತ್ ನ ಮುಖ್ಯ   ಕಾರ್ಯನಿರ್ವಾಹಣಾಧಿಕಾರಿ, ಅಪರ ಜಿಲ್ಲಾಧಿಕಾರಿ ಸೇರಿದಂತೆ ಉನ್ನತ ಅಧಿಕಾರದ ಆಡಳಿತ ಮತ್ತು ರಾಜಕೀಯದಲ್ಲಿ ಮಹಿಳೆಯರು ತಮ್ಮ ಪ್ರಾಬಲ್ಯ ಮೆರೆಯುತ್ತಿದ್ದಾರೆ. ಇತ್ತೀಚೆಗಷ್ಟೆ ಉಡುಪಿ ಜಿಲ್ಲಾಧಿಕಾರಿಯಾಗಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅಧಿಕಾರ ವಹಿಸಿಕೊಂಡಿದ್ದರು. ಈ ನಡುವೆ ಉಡುಪಿ ಜಿಲ್ಲೆಯ ನೂತನ ಎಸ್ಪಿಯಾಗಿ ನಿಶಾ ಜೇಮ್ಸ್ ಅವರನ್ನು ರಾಜ್ಯ ಸರಕಾರ ನಿಯುಕ್ತಿಗೊಳಿಸಿದೆ.

ಅದರಂತೆ ಜಿಲ್ಲೆಯ ರಾಜಕೀಯ ಪಾರುಪತ್ಯ ಕೂಡ ಮಹಿಳೆಯರ ಕೈಯ್ಯಲ್ಲೇ ಇದೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ಡಾ. ಜಯಮಾಲ ಅಧಿಕಾರ ಚಲಾಯಿಸುತ್ತಿದ್ದಾರೆ. ಇನ್ನೊಂದೆಡೆ ಶೋಭಾ ಕರಂದ್ಲಾಜೆ ಉಡುಪಿ ಲೋಕಸಭಾ ಕ್ಷೇತ್ರ ಸಂಸದರಾಗಿದ್ದಾರೆ.

ಜಿಲ್ಲಾಧಿಕಾರಿಯಾಗಿ ಹೆಪ್ಸಿಬಾ ರಾಣಿ ಕೊರ್ಲಪಾಟಿ

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಇತ್ತೀಚೆಗೆ ಉಡುಪಿಯ ನೂತನ ಜಿಲ್ಲಾಧಿಕಾರಿಯಾಗಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರನ್ನು ರಾಜ್ಯ ಸರಕಾರ ನಿಯುಕ್ತಿಗೊಳಿಸಿತ್ತು. ಉಡುಪಿ ಜಿಲ್ಲೆಯ ಜಿಲ್ಲಾಧಿಕಾರಿ ಸ್ಥಾನಕ್ಕೆ ನಿಯುಕ್ತಿಗೊಳ್ಳುವ ಮೊದಲು ಹೆಪ್ಸಿಬಾ ರಾಣಿ ಕೊರ್ಲಪಾಟಿ ಹುಬ್ಬಳ್ಳಿ ಧಾರವಾಡದ ಸ್ಪೆಷಲ್ ಪರ್ಪಸ್ ವೆಹಿಕಲ್ ಇದರ ಆಡಳಿತ ನಿರ್ದೇಶಕರಾಗಿದ್ದರು. ಇವರು ಈ ಹಿಂದೆ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರಾಗಿಯೂ ಸೇವೆ ಸಲ್ಲಿಸಿದ್ದರು. ಹೆಬ್ಸಿಬಾ ಅವರು 2011ರ ಐಎಎಸ್ ಬ್ಯಾಚ್ ನವರಾಗಿದ್ದಾರೆ. ಈಗ ಮುಂಬರುವ ಲೋಕಸಭಾ ಚುನಾವಣೆಯ ಸಂಪೂರ್ಣ ಜವಾಬ್ದಾರಿ ಹೆಬ್ಸಿಬಾ ಅವರ ಕೈಯ್ಯಲ್ಲಿದೆ

ಎಸ್ಪಿಯಾಗಿ ನಿಶಾ ಜೇಮ್ಸ್

ಉಡುಪಿ ಜಿಲ್ಲೆಯ ನೂತನ ಎಸ್.ಪಿ.ಯಾಗಿ ನಿಶಾ ಜೇಮ್ಸ್ ಅವರನ್ನು ರಾಜ್ಯ ಸರಕಾರ ನಿಯುಕ್ತಿಗೊಳಿಸಿದೆ. ನೂತನ ಎಸ್.ಪಿ.ಯಾಗಿ ನೇಮಕಗೊಂಡಿರುವ ನಿಶಾ ಜೇಮ್ಸ್ ಅವರು 2013ನೇ ಸಾಲಿನ ಐ.ಪಿ.ಎಸ್. ಅಧಿಕಾರಿಯಾಗಿದ್ದಾರೆ. ಅವರು ಬೆಂಗಳೂರಿನಲ್ಲಿ ಕೆ.ಎಸ್.ಆರ್.ಪಿ.ಯ ನಾಲ್ಕನೇ ಬೆಟಾಲಿಯನ್ ನ ಕಮಾಂಡೆಂಟ್ ಆಗಿ ಕರ್ತವ್ಯ ನಿರ್ವಹಿಸಿದ್ದಾರೆ. ದಟ್ಟ ಅರಣ್ಯ ಹಾಗೂ ನಕ್ಸಲ್ ಪೀಡಿತ ಪ್ರದೇಶಗಳನ್ನು ಹೊಂದಿರುವ ಉಡುಪಿ ಜಿಲ್ಲೆಯ ಕಾನೂನು ಸುವ್ಯವಸ್ಥತೆ ಜವಾಬ್ದಾರಿ ನಿಶಾ ಜೇಮ್ಸ್ ಅವರ ಹೆಗಲ ಮೇಲಿದೆ. ಅದಲ್ಲದೇ ಮುಂಬರುವ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಾರ್ಯ ತಂತ್ರ ರೂಪಿಸುವ ಜವಾಬ್ದಾರಿ ಕೂಡ ಶ್ರೀಮತಿ ನಿಶಾ ಜೇಮ್ಸ್ ಅವರ ಮೇಲಿದೆ.

ಉಡುಪಿ ಜಿಲ್ಲಾ ಪಂಚಾಯತ್ ಮುಖ್ಯ ನಿರ್ವಹಣಾಧಿಕಾರಿಯಾಗಿ ಸಿಂಧು ಬಿ.ರೂಪೇಶ್ ಕತ್ಯವ್ಯದಲ್ಲಿದ್ದಾರೆ.

ವಿದ್ಯಾಕುಮಾರಿ ಕೆ. ಉಡುಪಿ ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿದ್ದಾರೆ.