ಕೆಲ ಷರತ್ತಿನೊಂದಿಗೆ ಯಾಂತ್ರೀಕೃತ ಮೀನುಗಾರಿಕೆಗೆ ಅವಕಾಶ ನೀಡಲು ತೀರ್ಮಾನ: ಡಿಸಿ ಜಗದೀಶ್ 

ಉಡುಪಿ: ಉಡುಪಿ ಜಿಲ್ಲೆ ಗ್ರೀನ್ ಝೋನ್ ವ್ಯಾಪ್ತಿಗೆ ಬರುವುದರಿಂದ ಕೆಲವೊಂದು ವಿನಾಯಿತಿಗಳನ್ನು ನೀಡಲಾಗಿದೆ. ಎರಡು ದಿನಗಳೊಳಗೆ ಯಾಂತ್ರೀಕೃತ ಮೀನುಗಾರಿಕೆ ಅವಕಾಶ ಕಲ್ಪಿಸಲು ತೀರ್ಮಾನಿಸಲಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು,  ಕೆಲ ನಿಯಮಗಳೊಂದಿಗೆ ಯಾಂತ್ರೀಕೃತ ಮೀನುಗಾರಿಕೆ ಆರಂಭಿಸಲು ನಿರ್ಧರಿಸಲಾಗಿದ್ದು, ಈಗಾಗಲೇ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಮೀನುಗಾರಿಕಾ ಸಂಘದ ಪದಾಧಿಕಾರಿಗಳ ಜೊತೆ ಚರ್ಚೆ ನಡೆಸಲಾಗಿದೆ ಎಂದರು.
ಎಲ್ಲರು ಮೀನುಗಾರಿಕೆಗೆ ಒಟ್ಟಿಗೆ ಹೋಗಿ ಒಟ್ಟಿಗೆ ಬರುವಂತಿಲ್ಲ. ಬಂದರುಗಳಲ್ಲಿ ಜನ ಸೇರಲು ಅವಕಾಶ ಇಲ್ಲ. ಆ ಕಾರಣಕ್ಕಾಗಿ ಒಂದು ದಿನಕ್ಕೆ 30 ದೋಣಿಗಳು ಮಾತ್ರ ಸಮುದ್ರಕ್ಕೆ ತೆರಳಿ ಮೀನುಗಾರಿಕೆ ಮಾಡಬೇಕು ಮತ್ತು ಒಂದು ಬಾರಿಗೆ 10 ದೋಣಿಗಳು ಅಂತರ ಕಾಯ್ದುಕೊಂಡು ಮೀನುಗಳನ್ನು  ಅನ್ಲೋಡ್ ಮಾಡಬೇಕು ಎಂದರು.
ಬಂದರಿನಲ್ಲಿ ಯಾವುದೇ ಹರಾಜು ಅಥವಾ ಮಾರಾಟ ಪ್ರಕ್ರಿಯೆ ನಡೆಸಬಾರದು. ಅನ್ಲೋಡ್ ಮಾಡಿದ ಮೀನುಗಳನ್ನು ನೇರವಾಗಿ ಲಾರಿಗಳಿಗೆ ತುಂಬಿಸಿ, ಮಾರುಕಟ್ಟೆಗೆ ಕೊಂಡೊಯ್ದು ವ್ಯಾಪಾರ ಮಾಡಬೇಕು ಎಂಬ ನಿಯಮಗಳನ್ನು ರೂಪಿಸಲಾಗಿದೆ ಎಂದು ಹೇಳಿದರು.