ಉಡುಪಿಗೆ ಬಂತು ಭಯಾನಕ ಕೊರೋನಾ ವೇಷ: ಇದು ಕೊರೋನಾ ಜಾಗೃತಿ ಸಂದೇಶ

ಉಡುಪಿ:  ನಗರದ ಮಾರುಥಿ ವಿಥೀಕಾ ರಸ್ತೆಯಲ್ಲಿ ಸೋಮವಾರ ಭಯಾನಕ ರೂಪದ ವೇಷಧಾರಿಯೊರ್ವರು ಕಂಡು ಬಂದು ಅಚ್ಚರಿ ಮೂಡಿಸಿದರು. ಕೊರೊನಾ  ನಿಷೇಧಾಜ್ಞೆ ಕರ್ಫ್ಯೂ ಸಡಿಲಿಕೆಯ ಸಮಯದಲ್ಲಿ ಕಂಡು ಬಂದ ಭಯಾನಕ ವೇಷ ಇದು. ದಿನಸಿ ಸಮಾಗ್ರಿ ಇನ್ನಿತರ ಸಾಮಾಗ್ರಿಗಳ ಖರಿಧಿಸಲು ಬಂದಿರುವ ಗ್ರಾಹಕರು ಒಮ್ಮೆಗೆ ವೇಷವನ್ನು ಕಂಡು ಭೀತಿಗೆ ಒಳಗಾದರು. ಇಂತಹ ವೇಷಗಳು ಉಡುಪಿಯಲ್ಲಿ ಅಷ್ಟಮಿಯ ಸಂದರ್ಭಗಳಲ್ಲಿ ಕಂಡುಬರುವುದು ಸಾಮಾನ್ಯ. ಅಷ್ಟಮಿ ಅಲ್ಲದ ಸಂದರ್ಭದಲ್ಲಿ ಕಂಡು ಬಂದ ವೇಷಾಧಾರಿ ಯಾರು..? ಯಾಕೆ ಈ ವೇಷದ ಪ್ರದರ್ಶನ..? ಎಂದು ಜನರು ಅಚ್ಚರಿ ಪಡುವಂತಾದರು.
ಕೊನೆಗೆ ನೋಡಿದರೇ ಇದು, ಕೊರೊನಾ ಸೋಂಕು ಹರಡದಂತೆ, ಉಡುಪಿ ಜಿಲ್ಲಾ ನಾಗರಿಕ ಸಮಿತಿಯವರು ಸಾರ್ವಜನಿಕರಲ್ಲಿ ಜಾಗ್ರತಿ ಮೂಡಿಸಲು, “ಕೊರೊನಾಸುರ ಅಟ್ಟಹಾಸ” ಎನ್ನುವ ಅಣುಕು ಪ್ರದರ್ಶನವಾಗಿತ್ತು. ಕೊರೊನಾಸುರ ವೇಷವನ್ನು ನಾಗರಿಕ ಸಮಿತಿಯ ಪ್ರಧಾನ ಸಂಚಾಲಕ ನಿತ್ಯಾನಂದ ಒಳಕಾಡು ಧರಿಸಿದ್ದರು.
ಮುಖಕ್ಕೆ ಮಾಸ್ಕ್ ಧರಿಸುವಂತೆ, ಸಾಮಾಜಿಕ ಅಂತರ ಕಾಯ್ದು ಕೊಳ್ಳುವಂತೆ, ಪೊಲೀಸ್ ಇಲಾಖೆ, ಆರೋಗ್ಯ ಇಲಾಖೆಯು ಹೊರಡಿಸಿರುವ ಆರೋಗ್ಯ ಸುರಕ್ಷಾ ವಿಧಾನಗಳನ್ನು ಪಾಲಿಸುವಂತೆ  ನಿತ್ಯಾನಂದ ಒಳಕಾಡು ಅವರು ಅರಿವು ಮೂಡಿಸಿದರು.
ಈ ಸಂದರ್ಭ ನಾಗರಿಕ ಸಮಿತಿಯ ಜಾಗ್ರತಿ ಅಭಿಯಾನಕ್ಕೆ ಅಶ್ವಿನಿ ದೇವಾಡಿಗ, ಶ್ರೀಪಾದ್ ಭಟ್ ರಂಗಭೂಮಿ ಕಲಾವಿದ, ಕೆ. ಬಾಲಗಂಗಾಧರ ರಾವ್, ಲೊಕೇಶ್, ಶಿವಣ್ಣ, ರಾಘವೇಂದ್ರ ಪ್ರಭು ಮೊದಲಾದವರು  ಸಹಕರಿಸಿದರು.
-ತಾರಾನಾಥ್ ಮೇಸ್ತ ಶಿರೂರು.