ಖಾಸಗಿ ಆಸ್ಪತ್ರೆಯ ಎಡವಟ್ಟಿಗೆ ಉಡುಪಿ ಬಿಜೆಪಿ ಮುಖಂಡನ ಪತ್ನಿ ಬಲಿ.!

ಉಡುಪಿ: ತಲೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಯ ವೈದ್ಯರು ನೀಡಿದ ಚಿಕಿತ್ಸೆಯ ಎಡವಟ್ಟಿನಿಂದ  ಮೃತಪಟ್ಟಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದ್ದು, ಈ ಬಗ್ಗೆ ಉಡುಪಿ ನಗರ ಠಾಣೆಯಲ್ಲಿ ಮೃತ ಮಹಿಳೆಯ ಪತಿ ದೂರು ದಾಖಲಿಸಿದ್ದಾರೆ.
ಮೃತ ಮಹಿಳೆಯನ್ನು ಬಿಜೆಪಿ ಉಡುಪಿ ನಗರ ಮೋರ್ಚಾದ ಉಪಾಧ್ಯಕ್ಷ, ಇಂದಿರಾನಗರ ನಿವಾಸಿಯಾಗಿರುವ ಶಿವಪ್ರಸಾದ್ ಅವರ ಪತ್ನಿ ಶ್ರೀರಕ್ಷಾ (26) ಎಂದು ಗುರುತಿಸಲಾಗಿದೆ.
ಶ್ರೀರಕ್ಷಾ ಅವರು ಕಳೆದ ಮೂರು ದಿನಗಳಿಂದ ವಿಪರೀತ ತಲೆನೋವಿನಿಂದ ಬಳಲುತ್ತಿದ್ದರು. ಹಾಗಾಗಿ ಇಂದು ಬೆಳಿಗ್ಗೆ ಅವರನ್ನು ನಗರದ ಮಿಷನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿನ ವೈದ್ಯರು ಚುಚ್ಚುಮದ್ದು ನೀಡಿ ಯಾವುದೇ ಸಮಸ್ಯೆ ಇಲ್ಲ, ಗುಣಮುಖರಾಗುತ್ತಾರೆಂದು ಮನೆಗೆ ಕಳುಹಿಸಿದ್ದರು. ಆದರೆ ಮನೆಗೆ ಬಂದ ಕೆಲ ಸಮಯದ ಬಳಿಕ ಶ್ರೀರಕ್ಷಾ ಅವರ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದ್ದು, ತಕ್ಷಣ ಅವರನ್ನು ಮನೆಯವರು ಉಡುಪಿ ಇನ್ನೊಂದು ಆಸ್ಪತ್ರೆಗೆ ಕರೆದೊಯ್ದರು. ಪರೀಕ್ಷೆ ನಡೆಸಿದ ಅಲ್ಲಿನ ವೈದ್ಯರು ಶ್ರೀರಕ್ಷಾ ಅವರು ಈಗಾಗಲೇ ಮೃತಪಟ್ಟಿದ್ದಾರೆ ಎಂದು ಮಾಹಿತಿ ನೀಡಿದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಪತಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.