ಉಡುಪಿ: ಉಡುಪಿ ನಾಡಹಬ್ಬ ಶಿರೂರು ಪರ್ಯಾಯೋತ್ಸವದ ಪ್ರಯುಕ್ತ ಪರ್ಯಾಯ ಮಿಸ್ಟರ್ ಉಡುಪಿ 2026–ಕ್ಲಾಸಿಕ್ ಜಿಲ್ಲಾ ಮಟ್ಟದ ಬಾಡಿಬಿಲ್ಡಿಂಗ್ ಸ್ಪರ್ಧೆಯು ಜ. 17ರಂದು ಉಡುಪಿಯ ಮದರ್ ಆಫ್ ಸೋರೋಸ್ ಚರ್ಚ್ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಉಡುಪಿ ಜಿಲ್ಲಾ ಬಾಡಿ ಬಿಲ್ಡಿಂಗ್ ಅಸೊಶೀಯೇಶನ್ ಅಧ್ಯಕ್ಷರಾದ ಜೇಸನ್ ಡಾಯಸ್ ಹೇಳಿದರು.
ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧ ಭಾಗಗಳಿಂದ 150ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಸ್ಪರ್ಧೆಗೆ “”ಐಬಿಬಿಎಫ್ (IBBF)”ನಿಂದ ಆಯ್ಕೆಯಾದ ಅಂತರರಾಷ್ಟ್ರೀಯ ಹಾಗೂ ರಾಷ್ಟ್ರೀಯ ಮಟ್ಟದ ನ್ಯಾಯಾಧೀಶರು ತೀರ್ಪುಗಾರರಾಗಿ ಆಗಮಿಸಲಿದ್ದಾರೆ ಎಂದರು.
ಪರ್ಯಾಯ ಮಿಸ್ಟರ್ ಉಡುಪಿ ಕ್ಲಾಸಿಕ್ 2026 ಸ್ಪರ್ಧೆಯು 55, 60, 65, 70, 75, 80 ಹಾಗೂ 80 ಕಿ.ಜಿ. ಮೇಲ್ಪಟ್ಟಂತೆ ಒಟ್ಟು 7 ವರ್ಗಗಳಲ್ಲಿ ನಡೆಯಲಿದೆ. ಒಟ್ಟು ಪ್ರಶಸ್ತಿ ಮೊತ್ತ ರೂ.5,85,000 ಆಗಿದೆ. ಟೈಟಲ್ ವಿಜೇತರಿಗೆ ರೂ.1,50,000 ನಗದು ಬಹುಮಾನ ಮತ್ತು ಟ್ರೋಫಿ, ರನ್ನರ್ ಅಪ್ ವಿಜೇತರಿಗೆ ರೂ.50,000, ಟೈಟಲ್ ವಿಜೇತ ಕೋಚ್ ಗೆ ರೂ.25,000 ನೀಡಲಾಗುವುದು.
ಪ್ರತಿ ವರ್ಗದಲ್ಲಿ ಟಾಪ್ 5 ಸ್ಥಾನ ಗಳಿಸಿದವರಿಗೆ ಕ್ರಮವಾಗಿ ರೂ.10,000, ರೂ.8,000, ರೂ.6,000, ರೂ.4,000 ಮತ್ತು ರೂ.2,000 ಬಹುಮಾನ ನೀಡಲಾಗುತ್ತದೆ. ಈ ಮೂಲಕ 7 ವಿಭಾಗಗಳಿಗೆ ಒಟ್ಟು ರೂ.2,10,000 ಬಹುಮಾನ ವಿತರಿಸಲಾಗುತ್ತದೆ.
ಬೆಸ್ಟ್ ಪೋಸರ್ ಸ್ಪರ್ಧೆ ದೇಹಸೌಷ್ಟವ ಸ್ಪರ್ಧಿಗಳಿಗಾಗಿ ಮಾತ್ರ ‘ಬೆಸ್ಟ್ ಪೋಸರ್’ ಸ್ಪರ್ಧೆ ಆಯೋಜಿಸಲಾಗಿದ್ದು, ಒಂದು ನಿಮಿಷದ ಫ್ರೀ ಪೋಸಿಂಗ್ ಅವಕಾಶ ನೀಡಲಾಗುತ್ತದೆ. ಅತ್ಯಾಕರ್ಷಕ ಪೋಸರ್ಗೆ ರೂ.15,000 ನಗದು ಬಹುಮಾನ ಮತ್ತು ಟ್ರೋಫಿ ನೀಡಲಾಗುತ್ತದೆ.
ಮೆನ್ಸ್ ಫಿಸಿಕ್ ವಿಭಾಗ:
ಮೆನ್ಸ್ ಫಿಸಿಕ್ ಸ್ಪರ್ಧೆ ಒಂದೇ ಗುಂಪಿನಲ್ಲಿ ನಡೆಯಲಿದ್ದು, ಟೈಟಲ್ ವಿಜೇತರಿಗೆ 40,000, ದ್ವಿತೀಯ – ರೂ.25,000, ತೃತೀಯ – ರೂ.20,000, ಚತುರ್ಥ – ರೂ.15,000 ಹಾಗೂ ಪಂಚಮ – ರೂ.10,000 ನೀಡಲಾಗುವುದು. ಟೈಟಲ್ ವಿಜೇತನ ಕೋಚ್ ಗೆ ರೂ.25,000 ನಗದು ಬಹುಮಾನ ನೀಡಲಾಗುತ್ತದೆ ಎಂದರು.
ಸ್ಪರ್ಧೆಯ ಉದ್ಘಾಟನೆ ಸಂಜೆ 6 ಗಂಟೆಗೆ ನಡೆಯಲಿದ್ದು, ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಉಡುಪಿ ಶೋಕಮಾತಾ ಚರ್ಚಿನ ಧರ್ಮಗುರು ಚಾರ್ಲ್ಸ್ ಮಿನೇಜಸ್ ಆಶೀರ್ವಚನ ನೀಡಲಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಪರ್ಧೆಯನ್ನು ಉದ್ಘಾಟಿಸಲಿದ್ದಾರೆ.
ಸಭೆಯ ಅಧ್ಯಕ್ಷತೆಯನ್ನು ಕಾಂಗ್ರೆಸ್ ಮುಖಂಡ ಪ್ರಸಾದ್ ರಾಜ್ ಕಾಂಚನ್ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಡಾ| ಐವನ್ ಡಿಸೋಜಾ, ಅನಿವಾಸಿ ಭಾರತೀಯ ಸಮಿತಿ ಉಪಾಧ್ಯಕ್ಷರಾದ ಡಾ. ಆರತಿ ಕೃಷ್ಣ, ಮಾಜಿ ಸಚಿವರಾದ ಕೆ ಜಯಪ್ರಕಾಶ್ ಹೆಗ್ಡೆ, ವಿನಯ್ ಕುಮಾರ್ ಸೊರಕೆ, ಮಾಂಡವಿ ರಿಯಲ್ ಎಸ್ಟೆಟ್ & ಡೆವಲಪರ್ಸ್ ನ ನಿರ್ದೇಶಕ ಗ್ಲೆನ್ ಡಯಾಸ್, ಬಾಡಿ ಬಿಲ್ಡಿಂಗ್ ಅಸೋಸಿಯೇಶನ್ ಅಧ್ಯಕ್ಷರಾದ ಜೇಸನ್ ಡಯಾಸ್, ಉದ್ಯಮಿ ಮಿಥಿಲೇಶ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ UDABB ಅಧ್ಯಕ್ಷ ಹಾಗೂ ಸಹ ಆಯೋಜಕ ಜೇಸನ್ ಡಯಾಸ್, ಸಹ ಆಯೋಜಕ ಉದ್ಯಮಿ ಮಿಥಿಲೇಶ್, ಕಾರ್ಯದರ್ಶಿ ವಿಶ್ವನಾಥ ಕಾಮತ್ ಮತ್ತು ಖಜಾಂಚಿ ಮೃತಿ ಜಿ. ಬಂಗೇರಾ, ಜೋನ್ಸನ್ ಡಿಸೋಜಾ ಉಪಸ್ಥಿತರಿದ್ದರು.

















