ಮೂರು ಹೊತ್ತು ಊಟ ಬಿಡಿ: ಹಸಿದವರ ಹೊಟ್ಟೆ ತುಂಬಿಸಿ: ಅದಮಾರು ಶ್ರೀ

ಉಡುಪಿ: ದೇಶದಲ್ಲಿ ಕೋವಿಡ್ 19 (ಕೊರೊನಾ) ಸೋಂಕಿನ ಹರಡುವಿಕೆ ಹೆಚ್ಚಾಗುತ್ತಿದ್ದು ಇದರಿಂದ ಭವಿಷ್ಯದಲ್ಲಿ ಆಹಾರದ ಕೊರತೆ ಎದುರಾಗುವ ಸಾಧ್ಯತೆಗಳಿವೆ. ಹಾಗಾಗಿ ಆರೋಗ್ಯವಂತರು ಒಂದು ದಿನವಿಡೀ ಉಪವಾಸವಿದ್ದು, ಆ ಮೂಲಕ ಹತ್ತಿರದಲ್ಲಿರುವ ಹಸಿದವರ ಹೊಟ್ಟೆ ತುಂಬಿಸುವ ಕಾರ್ಯ ಮಾಡಬೇಕು ಎಂದು ಪರ್ಯಾಯ ಅದಮಾರು ಮಠದ ಈಶಪ್ರಿಯ ಸ್ವಾಮೀಜಿ ಕರೆ ನೀಡಿದ್ದಾರೆ.
ಒಂದು ದಿನ ಮೂರು ಹೊತ್ತು ಊಟ ಬಿಡುವುದರಿಂದ ದೇಶದ ಆಹಾರ ಸರಬರಾಜು ವ್ಯವಸ್ಥೆ ಮೇಲಿನ ಒತ್ತಡ ಕಡಿಮೆಯಾಗುತ್ತದೆ. ಒಳ್ಳೆಯ ಮನಸ್ಸಿನಿಂದ ಉಪವಾಸ ಮಾಡಿ ಆಹಾರ ತ್ಯಜಿಸಿದರೆ ಶ್ರೀಕೃಷ್ಣನ ಅನುಗ್ರಹವನ್ನು ಪಡೆಯಬಹುದು ಎಂದು ಹೇಳಿದ್ದಾರೆ.