ಮೀನು ಹಿಡಿಯಲು ಹೋದ ಇಬ್ಬರು ನದಿಯಲ್ಲಿ ಮುಳುಗಿ ಸಾವು

ಬೆಳ್ತಂಗಡಿ: ಮೀನು ಹಿಡಿಯಲು ಹೋದ ಇಬ್ವರು ನದಿಯಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳ್ತಂಗಡಿ ಪಂಪ್ ಹೌಸ್ ಬಳಿ ಸೋಮಾವತಿ ನದಿಯಲ್ಲಿ ನಿನ್ನೆ ಸಂಜೆ ಸಂಭವಿಸಿದೆ.

ನದಿಯಲ್ಲಿ ಮುಳುಗಿದ ಇಬ್ಬರ ಪೈಕಿ ಓರ್ವರನ್ನು ಉಜಿರೆ ಶಿವಾಜಿ ನಗರದ ರೆಂಜಳ ನಿವಾಸಿ ರಮೇಶ್ (48) ಎಂದು ಗುರುತಿಸಲಾಗಿದೆ. ಇನ್ನೊಬ್ಬರ ಗುರುತು ಪತ್ತೆಯಾಗಿಲ್ಲ. ರಮೇಶ್ ಅವರ ಮೃತದೇಹ ಇಂದು ಪತ್ತೆಯಾಗಿದೆ.

ಸೋಮಾವತಿ ನದಿಯ ಜಾಕ್ ವೆಲ್ ಸಮೀಪ ದಡದಲ್ಲಿ ಇಂದು ಅವರ ಉಡುಗೆ ಮತ್ತು ಮೀನು ಹಿಡಿಯುವ ಬಲೆ, ಮೊಬೈಲ್ ದೊರಕಿದೆ. ಕೂಡಲೇ ಅಗ್ನಿಶಾಮಕ ದಳ, ಪೊಲೀಸ್ ಇಲಾಖೆ ಭೇಟಿ ನೀಡಿ ನದಿಯಲ್ಲಿ ಶೋಧಕಾರ್ಯ ಮುಂದುವರೆಸಿದ್ದು, ಇಂದು ಸಂಜೆಯ ವೇಳೆಗೆ ರಮೇಶ್ ಅವರ ಮೃತದೇಹ ನದಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಇನ್ನೊಬ್ಬರ ವ್ಯಕ್ತಿಯ ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ.