ಏಡಿ ಹಿಡಿಯಲು ಹೋದ ಬಾಲಕರಿಬ್ಬರು ಬಾವಿಗೆ ಬಿದ್ದು ಮೃತ್ಯು: ಓರ್ವ ಬಾಲಕ ಪ್ರಾಣಾಪಾಯದಿಂದ ಪಾರು

ಬೆಳಗಾವಿ: ತಾಲೂಕಿನ ಬೆಕ್ಕಿನಕೇರಿ ಎಂಬಲ್ಲಿ ಜಮೀನಿನಲ್ಲಿದ್ದ ತೆರೆದ ಬಾವಿಯಲ್ಲಿ ಏಡಿ ಹಿಡಿಯಲು ಹೋದ ಮೂವರು ಬಾಲಕರು ಬಾವಿಗೆ ಬಿದ್ದ ಪರಿಣಾಮ ಇಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಓರ್ವ ಬಾಲಕ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ವರದಿಯಾಗಿದೆ.

ಮಹಾರಾಷ್ಟ್ರದ ಚಂದಗಡ್ ಗ್ರಾಮದ ನಿವಾಸಿ ಲೋಕೇಶ ಪಾಟೀಲ್ (10) ಹಾಗೂ ಬೆಕ್ಕಿನಕೇರಿ ಗ್ರಾಮದ ನಿಖಿಲ್ ಬೊಂದ್ರೆ (7) ಎಂದು ಮೃತ ಬಾಲಕರು.

ಶಾಲೆಗೆ ರಜೆ ಇರುವ ಕಾರಣ ಲೋಕೇಶ್ ಬೆಕ್ಕಿನಕೇರಿಯ ತನ್ನ ಸಂಬಂಧಿಗಳ ಮನೆಗೆ ಬಂದಿದ್ದನು. ಮಂಗಳವಾರ ಬೆಳಿಗ್ಗೆ ಮೂವರು ಬಾಲಕರು ಜಮೀನೊಂದರಲ್ಲಿದ್ದ ತೆರೆದ ಬಾವಿಯಲ್ಲಿ ಏಡಿಗಳನ್ನು ಹಿಡಿಯಲು ತೆರಳಿದ್ದರು. ಈ ವೇಳೆ ಆಯತಪ್ಪಿ ಬಾವಿಯೊಳಗೆ ಬಿದ್ದಿದ್ದು, ಈಜಲು ಬಾರದ ಇಬ್ಬರು ಬಾಲಕರು ಮೃತಪಟ್ಟರೆ, ಒಬ್ಬ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದು ಬಂದಿದೆ.