ತುಳು ಚಿತ್ರನಟ ಅರವಿಂದ ಬೋಳಾರ್ ಬೈಕ್ ಸ್ಕಿಡ್: ಕಾಲಿಗೆ ಏಟು 

ಮಂಗಳೂರು: ತುಳುನಾಡ ಮಾಣಿಕ್ಯ ಎಂದೇ ಖ್ಯಾತರಾಗಿರುವ ಹಾಸ್ಯನಟ, ಕಲಾವಿದ ಅರವಿಂದ ಬೋಳಾರ್ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನವೊಂದು ನಗರದ ಪಂಪ್‌ವೆಲ್ ಬಳಿ ಇಂದು ಸ್ಕಿಡ್ಡಾಗಿ ಉರುಳಿದ್ದು ನಟನ ಕಾಲಿಗೆ ಏಟಾಗಿದೆ.

ಅತೀ ವೇಗವಾಗಿ ಚಲಿಸಿಕೊಂಡು ಬರುತ್ತಿದ್ದ ಬಷ್ಟೊಂದು ಢಿಕ್ಕಿ ಹೊಡೆಯುವುದನ್ನು ತಪ್ಪಿಸುವ ಸಲುವಾಗಿ ಅರವಿಂದ್ ಬೋಳಾರ್ ತಾನು ಚಲಾಯಿಸುತ್ತಿದ್ದ ದ್ವಿಚಕ್ರ ವಾಹನದ ಬ್ರೇಕ್ ಹಾಕಿದ್ದು, ಈ ಸಂದರ್ಭ ಸ್ಕಿಡ್ಡಾಗಿ ಬಿದ್ದ ಪರಿಣಾಮ ಅರವಿಂದ ಬೋಳಾರ್‌ ಅವರ ಕಾಲಿಗೆ ಏಟಾಗಿದೆ. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.

ಏತನ್ಮಧ್ಯೆ ತಾನು ಆರೋಗ್ಯವಾಗಿದ್ದು, ಕಾಲಿಗೆ ಸ್ವಲ್ಪ ಏಟಾಗಿದೆ. ಜನರ ಪ್ರೀತಿ ಆಶೀರ್ವಾದಗಳಿಗೆ ತಾನು ಋಣಿಯಾಗಿದ್ದೇನೆ ಎಂದು ಅರವಿಂದ್ ಬೋಳಾರ್ ಇನ್ಸ್ಟಾಗ್ರಾಂ ಪೋಸ್ಟ್ ನಲ್ಲಿ ಹೇಳಿದ್ದಾರೆ.