ನೈಟ್ ಕರ್ಪ್ಯೂನಿಂದ ಧಾರ್ಮಿಕ ಆಚರಣೆಗೆ ತೊಂದರೆ: ಕರ್ಪ್ಯೂನಿಂದ ಉಡುಪಿ, ಮಣಿಪಾಲಕ್ಕೆ ವಿನಾಯಿತಿ ನೀಡುವಂತೆ ಸಿಎಂಗೆ ಶಾಸಕ ರಘುಪತಿ ಭಟ್ ಮನವಿ

ಉಡುಪಿ: ಜಿಲ್ಲೆಯಲ್ಲಿ ಈಗಾಗಲೇ ನಿಗದಿಯಾಗಿರುವ ದೈವಸ್ಥಾನಗಳ ನೇಮೋತ್ಸವ, ದೇವಸ್ಥಾನಗಳ ಉತ್ಸವ, ಯಕ್ಷಗಾನ ಹಾಗೂ ಆರ್ಥಿಕತೆಗೆ ಹೊಡೆತ ಬೀಳುವ ಹಿನ್ನೆಲೆಯಲ್ಲಿ ಉಡುಪಿ ಮತ್ತು ಮಣಿಪಾಲಕ್ಕೆ ವಿಧಿಸಿರುವ ರಾತ್ರಿ ಕರ್ಫ್ಯೂ ಅನ್ನು ಹಿಂಪಡೆಯಬೇಕೆಂದು ಉಡುಪಿ ಶಾಸಕ ರಘುಪತಿ ಭಟ್ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಈ ಬಗ್ಗೆ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಭಾಗದಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಅನೇಕ ಧಾರ್ಮಿಕ ಕಾರ್ಯಕ್ರಮಗಳು ರಾತ್ರಿಯ ವೇಳೆ ನಡೆಯುತ್ತವೆ. ಕಳೆದ ಬಾರಿಯು ಕೋವಿಡ್ ಲಾಕ್ ಡೌನ್ ನಿಂದ ಕೋಲ, ನೇಮೋತ್ಸವ ಹಾಗೂ ಇತರ ಧಾರ್ಮಿಕ ಕಾರ್ಯಕ್ರಮಗಳು ನಡೆದಿಲ್ಲ. ಹೀಗಾಗಿ ನೈಟ್ ಕರ್ಫ್ಯೂ ಹೇರಿದರೆ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುತ್ತದೆ. ವಿಶೇಷ ನೆಲೆಯಲ್ಲಿ ಉಡುಪಿ, ಮಣಿಪಾಲಕ್ಕೆ ನೈಟ್ ಕರ್ಪ್ಯೂವಿನಿಂದ ವಿನಾಯಿತಿ ನೀಡಬೇಕು ಎಂದು ವಿನಂತಿಸಿದ್ದಾರೆ.

ಈ ಭಾಗದಲ್ಲಿ ಸಾಕಷ್ಟು ಮಂದಿ ಈಗಗಾಲೇ ಕೋಲ ಮತ್ತು ದೈವಾರಾಧನೆಗೆ ದಿನಾಂಕ ನಿಗದಿ ಮಾಡಿದ್ದು, ಇವರ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗುವ ಕಾರಣ ರಾತ್ರಿ ಕರ್ಫ್ಯೂವನ್ನು ಮಣಿಪಾಲ ಮತ್ತು ಉಡುಪಿಯಲ್ಲಿ ತೆರವು ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.