ಆದಾಯ ಹೆಚ್ಚಿಸುವ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ ನೀಡುವ ಕೆಲಸವಾಗಲಿ:ಡಾ. ಜಯಮಾಲ

ಉಡುಪಿ : ಪ್ರವಾಸೋದ್ಯಮ ಅತೀ ಹೆಚ್ಚು ಪ್ರಚಾರ ಪಡೆದು ಜನರಿಗೆ ಪ್ರಪಂಚದ ಯಾವುದೇ ಮೂಲೆಯಲ್ಲಾದರೂ ಪ್ರತಿ ಕ್ಷಣದಲ್ಲೂ ಪ್ರವಾಸೋದ್ಯಮದ ಮಾಹಿತಿಯನ್ನು ನೀಡಿ ಸೆಳೆಯುವಂತಾಗಬೇಕು. ಮುಂದಿನ ದಿನಗಳಲ್ಲಿ ಎಷ್ಟು ಜನರನ್ನು ತಲುಪುತ್ತೇವೆಯೋ ಅಷ್ಟು ವೇಗವಾಗಿ ಪ್ರವಾಸೋದ್ಯಮ ಬೆಳೆಯುತ್ತದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಸಚಿವೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲ ಹೇಳಿದರು.

ಅವರು ಬುಧವಾರ ಜಿಲ್ಲಾಡಳಿತ, ಪ್ರವಾಸೋದ್ಯಮ ಇಲಾಖೆ ಉಡುಪಿ ಹಾಗೂ ಮಲ್ಪೆ ಅಭಿವೃದ್ಧಿ ಸಮಿತಿ(ರಿ)ರವರ ಸಹಯೋಗದಲ್ಲಿ ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆದ ಉಡುಪಿ ಜಿಲ್ಲೆಯ ಸಮಗ್ರ ಮಾಹಿತಿ ಹಾಗೂ ಛಾಯಾಚಿತ್ರವನ್ನೊಳಗೊಂಡ ಕಾಫಿಟೇಬಲ್ ಬುಕ್ ಅನ್ನು ಅನಾವರಣಗೊಳಿಸಿ, ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

     ಉಡುಪಿ ವಿಶಿಷ್ಟವಾದ, ಅನೇಕ ಸಾಂಸ್ಕøತಿಕವಾಗಿ ಶ್ರೀಮಂತವಾದ ಜಿಲ್ಲೆ, ಇಲ್ಲಿನ ನಮ್ಮ ಪರಂಪರೆಗಳನ್ನು ಮರೆಯಲು ಸಾಧ್ಯವಿಲ್ಲ. ಇಲ್ಲಿರುವ ನದಿಗಳು, ಬಸದಿಗಳು, ಚರ್ಚುಗಳು, ಇತಿಹಾಸ ಪ್ರಸಿದ್ಧ ದೇವಸ್ಥಾನಗಳು ಸಾಕ್ಷಾತ್ ದೇವರೆ ನೆಲೆಸಿರುವ ಕೀರ್ತಿ ಪಡೆದಿರುವ ನಾಡು. ಪ್ರವಾಸಿಗರನ್ನು ಸೆಳೆಯಲು ಇಲ್ಲಿರುವ ಅವಕಾಶಗಳನ್ನು ಉಪಯೋಗಿಸಿಕೊಂಡು ಪ್ರವಾಸಿ ತಾಣಗಳಾಗಿ ಮಾಡಿದಾಗ ಪ್ರಪಂಚವನ್ನು ನಮ್ಮತ್ತ ಸೆಳೆಯಲು ಸಾಧ್ಯ ಎಂದರು.             ಇದೇ ಸಂದರ್ಭದಲ್ಲಿ 12 ಮಂದಿಗೆ ಪ್ರವಾಸಿ ಟ್ಯಾಕ್ಸಿ ಸಹಾಯಧನ ಹಾಗೂ  ಉಡುಪಿ ಜಿಲ್ಲೆಯಲ್ಲಿ 2015-20 ರ ನೀತಿಯನ್ವಯ ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆಗೊಂಡ 9 ಹೋಟೆಲ್ ಯೋಜನೆಗಳಿಗೆ ಬಿಡುಗಡೆಯಾದ ಒಟ್ಟು 4 ಕೋಟಿ 69 ಲಕ್ಷ ಸಹಾಯ ಧನವನ್ನು ಸಚಿವೆ ಡಾ. ಜಯಮಾಲ  ವಿತರಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಉಡುಪಿ ನಗರ ಸಭೆ ಪೌರಾಯುಕ್ತ ಆನಂದ ಬಿ ಕಲ್ಲೋಳಿಕರ್, ಕೋಸ್ಟಲ್ ಟೂರಿಸಂ ಅಸೋಸಿಯೇಶನ್ ಅಧ್ಯಕ್ಷ ಮನೋಹರ್ ಶೆಟ್ಟಿ, ಅಪ್ನಾ ಹಾಲೀಡೇಸ್‍ನ ನಾಗರಾಜ್ ಹೆಬ್ಬಾರ್, ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕಿ ಅನಿತಾ ಭಾಸ್ಕರ್ ಉಪಸ್ಥಿತರಿದ್ದರು.