ಹೈಕಮಾಂಡ್ ಗೆ ಬೆದರಿಕೆ ಹಾಕಿ ಬೊಮ್ಮಾಯಿ ಸಿಎಂ ಮಾಡಿದ್ದಾರೆ: ಯತ್ನಾಳ್ ಗಂಭೀರ ಆರೋಪ

ವಿಜಯಪುರ: ಬಿ.ಎಸ್. ಯಡಿಯೂರಪ್ಪನವರು ಹೈಕಮಾಂಡ್ ಗೆ ಬೆದರಿಕೆಯೊಡ್ಡಿ ಬಸವರಾಜ ಬೊಮ್ಮಾಯಿಯನ್ನು ಸಿಎಂ ಮಾಡಿದ್ದಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗಂಭೀರ ಆರೋಪ ಮಾಡಿದರು.

ನನಗೆ ಮುಖ್ಯಮಂತ್ರಿ ಆಗೋ ಅವಕಾಶವಿತ್ತು. ಆದರೆ, ಯಡಿಯೂರಪ್ಪ ನನಗೆ ಅವಕಾಶ ತಪ್ಪಿಸಿದರು. ಯತ್ನಾಳ್ ಅವರನ್ನ ಸಿಎಂ ಮಾಡಿದರೆ ಮೂರು ತಿಂಗಳಲ್ಲಿ ಸರ್ಕಾರ‌ ಬೀಳಿಸುತ್ತೇನೆಂದು ಕೇಂದ್ರದ ನಾಯಕರಿಗೆ ಬೆದರಿಕೆ ಹಾಕಿದ್ದರು ಎಂದು ಹೊಸ ಬಾಂಬ್ ಸಿಡಿಸಿದರು.

ನಾನು ಸಚಿವ ಸ್ಥಾನಕ್ಕಾಗಿ ಲಾಬಿ ಮಾಡಲ್ಲ. ಈ ಹಿಂದೆಯೂ ನಾನು ದೆಹಲಿ‌ಯಲ್ಲಿ ಲಾಬಿ ಮಾಡಿ ಕೇಂದ್ರದಲ್ಲಿ ಸಚಿವ ಆಗಿರಲಿಲ್ಲ. ದೆಹಲಿ ಲಾಬಿ ಮಾಡಿ ಮಂತ್ರಿಯಾಗೋವಷ್ಟು‌ ಕೆಳಮಟ್ಟದ ರಾಜಕಾರಣಿಯಲ್ಲ ನಾನು ಎಂದರು.

10 ಸಾವಿರ ಕೋಟಿ ಭ್ರಷ್ಟಾಚಾರವನ್ನು ಮಾಜಿ ಸಿಎಂ ಯಡಿಯೂರಪ್ಪ ಮಾಡಿದ್ದಾರೆ. ಹೀಗಾಗಿ ಯತ್ನಾಳ್ ಸಿಎಂ ಆದರೆ ಇವರೆಲ್ಲಾ ಜೈಲಿಗೆ ಹೋಗ್ತಾರೆ ಎಂಬ ಭಯವಿದೆ. ಅದಕ್ಕಾಗಿ ನನಗೆ ಸಿಎಂ ಆಗುವ ಅವಕಾಶವನ್ನು ತಪ್ಪಿಸಿದರು ಎಂದು ಇದೇ ವೇಳೆ ಆರೋಪ ಮಾಡಿದರು.

ರಾಜ್ಯದ ಮುಖ್ಯಮಂತ್ರಿ ಆಗಲು ಬಸವರಾಜ ಬೊಮ್ಮಾಯಿ ಅವರ ಹೆಸರಿಗಿಂತ ಮುಂಚೆಯೇ ನನ್ನ ಹೆಸರೇ ಇತ್ತು. ಆದರೆ ಅದನ್ನು ತಪ್ಪಿಸಿದರು. ಬಿಎಸ್ವೈ ತನ್ನ ಸುಪುತ್ರ ಭ್ರಷ್ಟ ವಿಜಯೇಂದ್ರನನ್ನು ತನ್ನ ಉತ್ತರಾಧಿಕಾರಿಯನ್ನಾಗಿ ಮಾಡಲು ಈ ತಂತ್ರ ಮಾಡಿದ್ದಾರೆ. ನಾನು ಪ್ರಾಮಾಣಿಕ ಇದ್ದೇನೆ, ನಾನೇನಾದರೂ ಸಿಎಂ ಆಗಿದ್ದರೆ ಇಡೀ ರಾಜ್ಯದಲ್ಲಿ ಹಿಂದುತ್ವದ ಅಲೆ ಏಳುತ್ತಿತ್ತು. ಹಿಂದುತ್ವದ ಆಧಾರದ ಮೇಲೆ ಮುಂದಿನ ಚುನಾವಣೆಯಲ್ಲಿ 150 ಸ್ಥಾನಗಳನ್ನು ಗೆದ್ದರೆ, ಅವರ ಅಸ್ತಿತ್ವಕ್ಕೆ ಧಕ್ಕೆ ಆಗುತ್ತಿತ್ತು. ಎಲ್ಲ ಮಠಾಧೀಶರ ಬಾಯಿ ಬಂದ್ ಆಗುತ್ತಿತ್ತು ಎಂದು ಯತ್ನಾಳ್ ಹೇಳಿದರು.