ಮಂದಾರ್ತಿ: ಧಗಧಗಿಸುತ್ತಿದ್ದ ಕಾರಿನಲ್ಲಿದ್ದದ್ದು ಬೆಂಗಳೂರಿನ ಯುವ ಜೋಡಿ; ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಪ್ರೇಮಿಗಳು?

ಮಂದಾರ್ತಿ: ಮಂದಾರ್ತಿ ಸಮೀಪದ ಹೆಗ್ಗುಂಜ್ಜೆಯಲ್ಲಿ ಬೆಳ್ಳಂಬೆಳಗ್ಗೆ ಉರಿಯುತ್ತಿದ್ದ ಕಾರಿನಲ್ಲಿ ಜೋಡಿ ಶವಗಳು ಪತ್ತೆಯಾಗಿದ್ದು, ಇದು ಆತ್ಮಹತ್ಯೆ ಕೃತ್ಯ ಎಂದು ತನಿಖೆಯಿಂದ ತಿಳಿದು ಬಂದಿದೆ.

ಯಶವಂತ್ (23) ಮತ್ತು ಜ್ಯೋತಿ (23) ಆತ್ಮಹತ್ಯೆ ಮಾಡಿಕೊಂಡಿರುವ ಯುವ ಜೋಡಿ. ಇವರು ಬೆಂಗಳೂರಿನ ಆರ್.ಟಿ.ನಗರದವರು ಎನ್ನಲಾಗಿದೆ. ಮುಂಜಾನೆ ಸುಮಾರು 3 ಗಂಟೆ ಸುಮಾರಿಗೆ ಸುಡುತ್ತಿದ್ದ ಕಾರನ್ನು ಕಂಡು ಸ್ಥಳೀಯರು ಬೆಂಕಿ ನಂದಿಸಿದಾಗ ಕಾರಿನೊಳಗೆ ಯುವಕ ಮತ್ತು ಯುವತಿಯ ಶವ ಪತ್ತೆಯಾಗಿದೆ. ಮೃತರು ನಿನ್ನೆ (ಮೇ 21) ಮಂಗಳೂರಿಗೆ ಬಂದು ಹುಸೇನ್ ಎಂಬವರಿಂದ ಸ್ವಿಫ್ಟ್ ಕಾರು ಬಾಡಿಗೆ ಪಡೆದು ಉಡುಪಿಯತ್ತ ಪ್ರಯಾಣ ಬೆಳೆಸಿದ್ದರು.

ಕಳೆದ 3 ದಿನಗಳ ಹಿಂದೆ ಯಶವಂತ್ ಮತ್ತು ಜ್ಯೋತಿ ನಾಪತ್ತೆಯಾಗಿರುವ ಬಗ್ಗೆ ಬೆಂಗಳೂರಿನ ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಯಶವಂತ್ ಮತ್ತು ಜ್ಯೋತಿ ಮೇ 18 ರ ಮಧ್ಯಾಹ್ನ ಮನೆಯಿಂದ ತೆರಳಿದ್ದರು. ಜ್ಯೋತಿ ಚೋಳನಾಯಕನಹಳ್ಳಿ ನಿವಾಸಿಯಾಗಿದ್ದರೆ, ಯಶವಂತ್ ಯಾದವ್ ಮುನಿಯಪ್ಪ ಲೇಔಟ್ ನಿವಾಸಿ. ಜ್ಯೋತಿ ಒಂದು ವರ್ಷದ ಹಿಂದಷ್ಟೇ ಬಿಕಾಂ ಮುಗಿಸಿದ್ದಳು. ಯಶವಂತ್ ಯಾದವ್ ಪದವಿ ಮುಗಿಸಿ ಕಂಪ್ಯೂಟರ್ ಕೋರ್ಸ್ ಮಾಡುತ್ತಿದ್ದ.

ಮೇ 19 ರಂದು ಹುಡುಗಿ ಕಾಣೆಯಾಗಿರುವ ಬಗ್ಗೆ ಪೋಷಕರು ದೂರು ನೀಡಿದ್ದರು. ಯುವಕನ ಪೋಷಕರು ಮೇ 20ರಂದು ದೂರು ದಾಖಲಿಸಿದ್ದರು. ಇಂಟರ್​​​ವ್ಯೂಗೆ ಹೋಗಿ ಬರುವುದಾಗಿ ಹೇಳಿದ್ದ ಜ್ಯೋತಿ ತಿರುಗಿ ಮನೆಗೆ ಬಂದಿರಲಿಲ್ಲ. ಎಲ್ಲ ಕಡೆ ಹುಡುಕಿದರೂ ಪತ್ತೆಯಾಗದಿದ್ದ ಕಾರಣ ಮಗಳು ಕಾಣೆಯಾಗಿರುವ ಬಗ್ಗೆ ತಾಯಿ ರತ್ನಮ್ಮ ಠಾಣೆಗೆ ದೂರು ನೀಡಿದ್ದರು. ಅತ್ತ ಯುವಕನ ​​ ತಂದೆ ವೆಂಕಟರಮಣ ರಾವ್​, ಮಗ ಬೈಕ್​ನಲ್ಲಿ ಟ್ಯಾಲಿಕ್ಲಾಸ್​​ಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ, ಆದರೆ ಇನ್ನೂ ಬಂದಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು.

ಆತ್ಮಹತ್ಯೆಗೂ ಮೊದಲು ಮನೆಗೆ ಮೆಸೇಜ್ ಮಾಡಿದ್ದ ಮೃತರು:

ಆತ್ಮಹತ್ಯೆಗೂ ಮುನ್ನಾ ಕುಟುಂಬಸ್ಥರಿಗೆ ನಾವು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇವೆ ಎಂದು ಮೆಸೇಜ್ ಮಾಡಿದ್ದರು ಎನ್ನಲಾಗಿದೆ.

ಹುಡುಗಿ ಹಾಗೂ ಹುಡಗನಿಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದ ಪೋಷಕರು:

ದೂರು ದಾಖಲಾದ ಬಳಿಕ ಪೊಲೀಸರು ಪೋಷಕರನ್ನು ಕರೆದು ವಿಚಾರಣೆ ನಡೆಸಿದ್ದರು. ಆಗ ಹುಡುಗ ಹಾಗೂ ಹುಡುಗಿಗೆ ಯಾವುದೇ ಸಂಬಂಧ ಇಲ್ಲವೆಂದು ಪೋಷಕರು ಹೇಳಿದ್ದರು. ನಂತರ ಇಬ್ಬರ ಮೊಬೈಲ್ ಸಿಡಿಆರ್ ತೆಗೆದು ಪರೀಶೀಲನೆ ಮಾಡಿದ ವೇಳೆ ಇಬ್ಬರೂ ನಿರಂತರ ಸಂಪರ್ಕದಲ್ಲಿರುವುದು ಕಂಡುಬಂದಿದೆ. ಕಾಣೆಯಾದ ಬಗ್ಗೆ ರಾಜ್ಯದ ಎಲ್ಲಾ ಪೊಲೀಸ್ ಠಾಣೆಗಳಿಗೂ ಹೆಬ್ಬಾಳ ಪೊಲೀಸರು ಲುಕ್ ಔಟ್ ನೋಟೀಸ್ ಹೊರಡಿಸಿದ್ದರು. ಇದಾದ ಬಳಿಕ ಮೇ 22 ರಂದು ಯುವ ಜೋಡಿಗಳು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.