ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಸುಲ್ಕೋಡ್ ಯೋಜನೆಗೆ ವಿರೋಧ ವ್ಯಕ್ತಪಡಿಸಿದ ಗಡಿ ಭಾಗದ ಗ್ರಾಮಸ್ಥರು

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ಭಾಗದ ನೂರಾರು ಗ್ರಾಮಸ್ಥರು ಮಹಾರಾಷ್ಟ್ರದ ಗಡಿ ಪ್ರದೇಶದಲ್ಲಿ ನೀರಾವರಿ ಯೋಜನೆಯನ್ನು ಕೈಗೆತ್ತಿಕೊಳ್ಳುವ ಪ್ರಸ್ತಾಪವನ್ನು ವಿರೋಧಿಸಿದರು. ಮಹಾರಾಷ್ಟ್ರದ ಗಡಿ ಭಾಗದಲ್ಲಿರುವ ಸಾಂಗ್ಲಿ, ಮೀರಜ್ ಮತ್ತು ಇಚಲಕರಂಜಿ ಜಿಲ್ಲೆಯ ಹಳ್ಳಿಗಳು ಮತ್ತು ಪಟ್ಟಣಗಳ ನಿವಾಸಿಗಳು ಮೂಲಭೂತ ಸೌಕರ್ಯಗಳನ್ನು ಪಡೆಯುವ ವಿಷಯದಲ್ಲಿ ತಮ್ಮನ್ನು ನಿರ್ಲಕ್ಷಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿ ಗ್ರಾಮಗಳನ್ನು ಕರ್ನಾಟಕಕ್ಕೆ ವಿಲೀನಗೊಳಿಸಬೇಕೆಂದು ಒತ್ತಾಯಿಸಿದರು.

ಅಸಮಾಧಾನದ ನಡುವೆ, ಮಹಾರಾಷ್ಟ್ರ ಸರ್ಕಾರವು ಸುಲ್ಕುಡ್ ಗ್ರಾಮದಲ್ಲಿ ದೂಧ ಗಂಗಾ ನದಿಗೆ ಬ್ಯಾರೇಜ್ ನಿರ್ಮಿಸುವ ಮೂಲಕ ಇಚಲಕರಂಜಿ ಜಿಲ್ಲೆಗೆ ನೀರು ಹರಿಸಲು ಯೋಜಿಸಿದೆ. ದೂಧಗಂಗಾ ನದಿಯು ಮಹಾರಾಷ್ಟ್ರ ಗಡಿಯಲ್ಲಿ ಹುಟ್ಟುತ್ತದೆಯಾದರೂ, ಕರ್ನಾಟಕದಲ್ಲಿ ಹರಿಯುತ್ತದೆ ಮತ್ತು ಸಾವಿರಾರು ಹೆಕ್ಟೇರ್ ಕೃಷಿ ಭೂಮಿಗೆ ನೀರುಣಿಸಲು ಮತ್ತು ದೇಶೀಯ ಉದ್ದೇಶಗಳಿಗಾಗಿ ಇದನ್ನು ಬಳಸಲಾಗುತ್ತದೆ.

‘ಸುಲ್ಕೋಡ್ ಯೋಜನೆ’ ಕೈಗೆತ್ತಿಕೊಂಡರೆ ಮಹಾರಾಷ್ಟ್ರದ ಕಾಗಲ್ ತಾಲ್ಲೂಕಿನ ನದಿ ದಂಡೆಯಲ್ಲಿರುವ ನೂರಾರು ಹಳ್ಳಿಗಳು ನೀರಿನ ಕೊರತೆಯನ್ನು ಎದುರಿಸಬೇಕಾಗುತ್ತದೆ. ಇದೇ ಭೀತಿಯಿಂದ ‘ದೂಧಗಂಗಾ ಬಚಾವೋ ಸಮಿತಿ’ ಬ್ಯಾನರ್ ಅಡಿಯಲ್ಲಿ ಯೋಜನೆ ವಿರುದ್ಧ ಹಳ್ಳಿಗರು ಆಂದೋಲನ ಆರಂಭಿಸಿದ್ದಾರೆ. ಕರ್ನಾಟಕದ ನಿಪ್ಪಾಣಿ ತಾಲೂಕಿನ ಗಡಿಗ್ರಾಮವಾದ ಬೇಡಕಿಹಾಳ್ ಗ್ರಾಮ ಪಂಚಾಯತ್ ಶನಿವಾರ ಮಹಾರಾಷ್ಟ್ರ ಯೋಜನೆಯನ್ನು ವಿರೋಧಿಸುವ ಮತ್ತು “ದೂಧಗಂಗಾ ಬಚಾವೋ ಸಮಿತಿ” ಆಂದೋಲನವನ್ನು ಬೆಂಬಲಿಸುವ ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ.

ದೂಧಗಂಗಾ ಯೋಜನೆ ಬದಲು ಪಂಚಗಂಗಾ ನದಿಯಿಂದ ಇಚಲಕರಂಜಿ ಜಿಲ್ಲೆಗೆ ನೀರು ಒದಗಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು. ಅತ್ತ ಪಂಚಗಂಗಾ ನದಿಯು ಕಾರ್ಖಾನೆ ತ್ಯಾಜ್ಯಗಳಿಂದ ಕಲುಷಿತಗೊಂಡಿದ್ದು ಬಳಕೆಗೆ ಯೋಗ್ಯವಾಗಿಲ್ಲ ಎನ್ನುವ ವಾದವೂ ಇದೆ.

ಅಧಿಕಾರಿಗಳ ಪ್ರಕಾರ ಮಹಾರಾಷ್ಟ್ರವು ಸುಲ್ಕೋಡ್ ಯೋಜನೆಯ ಟೆಂಡರ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದು, ಎರಡು ತಿಂಗಳಲ್ಲಿ ಕಾಮಗಾರಿ ಪ್ರಾರಂಭವಾಗಿ ಆರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ.