ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣ: ಅವಘಡ ಸಂಭವಿಸುವ ಸುಳಿವು ಮೊದಲೇ ಸಿಕ್ಕಿತ್ತಾ.?

ಉಡುಪಿ: ಡಿ. 13ರಂದು ಮಲ್ಪೆಯಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಸುವರ್ಣ ತ್ರಿಭುಜ ಬೋಟ್ ಗೆ ಅವಘಡ ಸಂಭವಿಸುವ ಮುನ್ಸೂಚನೆ ಮೊದಲೇ ಸಿಕ್ಕಿತ್ತು. ಬೋಟ್ ಬಂದರಿನಿಂದ ಹೊರಟು 3 ಕಿ.ಮೀ. ಕ್ರಮಿಸುತ್ತಿದ್ದಂತೆ ಬೋಟ್  ನ ರೇಡಿಯೇಟರ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು ಎಂಬ ಅಂಶ ತಡವಾಗಿ ಬೆಳಕಿಗೆ ಬಂದಿದೆ.
ರೇಡಿಯಟರ್ ನಲ್ಲಿ ದೋಷ ಕಂಡು ಬಂದ ತಕ್ಷಣವೇ ಚಾಲಕ ಬೋಟ್ ಅನ್ನು ಬಂದರಿನತ್ತಾ ತಿರುಗಿಸಿದ್ದಾನೆ. ದಡಕ್ಕೆ ಬಂದು ರೇಡಿಯೆಟರ್ ಅನ್ನು ಸರಿಪಡಿಸಿಕೊಂಡು ಪುನಃ ಮೀನುಗಾರಿಕೆ ತೆರಳಿದ್ದಾರೆ. ತಮ್ಮ ಜೊತೆ ತೆರಳಿದ ಮೀನುಗಾರರನ್ನು ತಲುಪುವ ಉದ್ದೇಶದಿಂದ ಚಾಲಕ ಬೋಟ್ ಅನ್ನು ಅತೀ ವೇಗವಾಗಿ ಚಲಾಯಿಸಿದ್ದಾನೆ ಎನ್ನಲಾಗಿದೆ. ಇದರಿಂದ ಮೊದಲೇ ದುರಸ್ತಿಗೆ ಒಳಗಾಗಿದ್ದ ರೇಡಿಯೇಟರ್ ನಲ್ಲಿ ಸ್ಫೋಟ ಸಂಭವಿಸುವ ಸಾಧ್ಯತೆಗಳಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಈ ಹಿನ್ನೆಲೆಯಲ್ಲಿ ಜ. 12ರಿಂದ ಅತ್ಯಾಧುನಿಕ ಸೋನಾರ್ ತಂತ್ರಜ್ಞಾನ ಬಳಸಿಕೊಂಡು 25ರಿಂದ 40 ನಾಟಿ ಮೈಲ್ ದೂರದಲ್ಲಿ ಸಮುದ್ರದ ತಳದಲ್ಲಿ ಶೋಧ ಕಾರ್ಯವನ್ನು ಆರಂಭಿಸಲಾಗಿದ್ದು, ಅದನ್ನು ಮುಂದುವರಿಸಲಾಗಿದೆ. ಸುವರ್ಣ ತ್ರಿಭುಜ ಬೋಟ್ ಡಿ. 15ರಂದು ಮೊಬೈಲ್ ಹಾಗೂ ವಯರ್ ಲೈಸ್ ಸಂಪರ್ಕ ಕಡಿದುಕೊಂಡ ಬಳಿಕ ಮಧ್ಯರಾತ್ರಿ 2ರಿಂದ ಬೆಳಿಗ್ಗೆ 7 ಗಂಟೆಯ ಸಮಯದಲ್ಲಿ ಏನಾಗಿದೆ ಎನ್ನುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ಮಲ್ಪೆ ಬಂದರಿನಿಂದ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ ಏಳು ಮಂದಿ ಮೀನುಗಾರರು ಸಹಿತ ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಬೋಟ್ ಅಪಹರಣಕ್ಕೊಳಗಾಗಿದೆಯೇ ಅಥವಾ ಅವಘಡಕ್ಕೆ ತುತ್ತಾಗಿದೆಯೆಂದು ಎರಡು ಆಯಾಮಗಳಲ್ಲಿ ಶೋಧ ನಡೆಸಲಾಗಿತ್ತು.
ಅಪಹರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೊಚ್ಚಿಯಿಂದ ಗುಜರಾತ್ ವರೆಗೆ ಹುಡುಕಾಟ ಮಾಡಲಾಗಿದೆ. ಆದರೆ ಯಾವುದೇ ಸುಳಿವು ಸಿಕ್ಕಿಲ್ಲ. ಹಾಗಾಗಿ ಬೋಟ್ ಅಪಹರಣಕ್ಕೊಳಗಾಗಿರುವ ಸಾಧ್ಯತೆ ಕಡಿಮೆ ಎಂಬ ನಿಲುವಿಗೆ ತನಿಖಾಧಿಕಾರಿಗಳು ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಡಿ. 16ರಿಂದ 18ರ ಮಧ್ಯೆ ಮಹಾರಾಷ್ಟ್ರದ ಸಿಂಧೂದುರ್ಗಾ ಪ್ರದೇಶದಲ್ಲಿ ಪ್ಲಾಸ್ಟಿಕ್ ಬಾಕ್ಸ್ ದೊರಕಿದೆ. ಹಾಗೆಯೇ ಡಿ. 15ರಂದು ಮುಂಬೈಯಿಂದ ಕಾರವಾರಕ್ಕೆ ತೆರಳಿದ ಕೊಚ್ಚಿನ್ ಹಡಗಿಗೆ ಹಾನಿಯಾಗಿದ್ದು,  ಇದು ಸುವರ್ಣ ತ್ರಿಭುಜ‌ ಬೋಟ್ ಗೆ ಡಿಕ್ಕಿಯಾಗಿ ಆಗಿರುವ ಅವಘಡವೇ ಎನ್ನುವುದರ ಕುರಿತು ಶೋಧ ಕಾರ್ಯ ಪ್ರಗತಿಯಲ್ಲಿದೆ.