“ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣ”: ನೆರವಿಗೆ ಪ್ರಧಾನಿಗೆ ಮನವಿ

ಉಡುಪಿ: ಸುವರ್ಣ ತ್ರಿಭುಜ ಬೋಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆಯಿಂದ ಮೀನುಗಾರಿಗೆ ತೆರಳಿದ್ದ ಬೋಟ್‌ ಇದುವರೆಗೂ ಪತ್ತೆಯಾಗದಿರುವುದು ಆತಂಕ ಸೃಷ್ಟಿಸಿದೆ. ಬೋಟ್‌ ಪತ್ತೆಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಮಾಡಲಾಗಿದೆ ಎಂದು ಶಾಸಕ ರಘುಪತಿ ಭಟ್‌ ಶನಿವಾರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಗೋವಾ, ಮಹಾರಾಷ್ಟ್ರ ಸರ್ಕಾರಗಳು ಕೂಡ ಬೋಟ್‌ ಪತ್ತೆಗೆ ಸಹಕಾರ ನೀಡಿವೆ. ಮೀನುಗಾರರು ಇದೊಂದು ಭಯೋತ್ಪಾದಕರ ಅಥವಾ ಕಡಲ್ಗಳ್ಳರ ಕೃತ್ಯ ಎಂದು ಶಂಕಿಸಿದ್ದು, ಈ ಸಂಬಂಧ ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಲಾಗಿದೆ. ಈಗಾಗಲೇ ಗೋವಾ-ಮಹಾರಾಷ್ಟ್ರ ಹೆಲಿಕಾಪ್ಟರ್ ಮೂಲಕ ಶೋಧ ನಡೆಸಲಾಗಿದೆ. ಬೋಟ್‌ ಅಪಹರಣ ಶಂಕೆ ಹಿನ್ನೆಲೆಯಲ್ಲಿ 2 ಪೊಲೀಸ್ ತಂಡಗಳು ಶೋಧ ನಡೆಸಿವೆ. ಆದರೂ ಪ್ರಯೋಜನವಾಗಿಲ್ಲ ಎಂದರು.

ಬೋಟ್‌ ದುರಂತಕ್ಕೀಡಾಗಿದ್ದರೆ ಅವಶೇಷಗಳು ಪತ್ತೆಯಾಗಬೇಕಿತ್ತು, ಮುಳುಗಿದ್ದರೂ ತೈಲ ಸೋರಿಕೆಯಾಗಬೇಕಿತ್ತು, ಈ ಪ್ರಕರಣದಲ್ಲಿ ಯಾವುದೂ ಆಗಿಲ್ಲ. ಮೀನುಗಾರರ ಸಂಪರ್ಕದಲ್ಲಿದ್ದ ಬೋಟ್‌ ಇದ್ದಕ್ಕಿದ್ದಂತೆ ನಾಪತ್ತೆಯಾಗಿರುವುದು ಆತಂಕ ತಂದಿದೆ ಎಂದು ಹೇಳಿದರು.