ಕನ್ನಡ ಪುಸ್ತಕ ನೀತಿ ಪುನರ್ ರಚನೆಗಾಗಿ ಸಾರ್ವಜನಿಕರಿಂದ ಸಲಹೆ ಆಹ್ವಾನ

ಉಡುಪಿ: ಕನ್ನಡ ಪುಸ್ತಕ ಲೋಕವು ಆಧುನಿಕ ಮಾಧ್ಯಮಗಳ ನೂತನ ಆವಿಷ್ಕಾರಗಳ ಫಲವಾಗಿ ವಿಸ್ತಾರಗೊಳ್ಳುತ್ತಿದೆ. ಪುಸ್ತಕೋದ್ಯಮದ ಎಲ್ಲಾ ಸಾಧ್ಯತೆ ಮತ್ತು ಸವಾಲುಗಳನ್ನು ಹೊಸ ದೃಷ್ಠಿಕೋನದಿಂದ ನೋಡುವ ಅಗತ್ಯತೆ ಇರುವುದರಿಂದ ಕನ್ನಡ ಪುಸ್ತಕ ನೀತಿಯನ್ನು ಪುನರ್ ರಚಿಸಲು ನಿರ್ಧರಿಸಲಾಗಿದೆ.

ಇ-ಪುಸ್ತಕ, ಆಡಿಯೋ ಪುಸ್ತಕ ಒಳಗೊಂಡಂತೆ ಆಧುನಿಕ ಪುಸ್ತಕೋದ್ಯಮದ ಸಾಧಕ-ಬಾಧಕಗಳು ಹಾಗೂ ಕನ್ನಡ ಪುಸ್ತಕ ಲೋಕದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿ ಪುಸ್ತಕ ನೀತಿ ರಚನೆ ಆಗಬೇಕಿದ್ದು, ಇದಕ್ಕಾಗಿ ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಕನ್ನಡ ಪುಸ್ತಕ ನೀತಿ ಪುನರ್ ರಚನೆಗೆ ಸಾರ್ವಜನಿಕರಿಂದ ಸಲಹೆ ಹಾಗೂ ಅಭಿಪ್ರಾಯಗಳನ್ನು ಆಹ್ವಾನಿಸಲಾಗಿದೆ.

ಬರಹಗಾರರು, ಚಿಂತಕರು, ಓದುಗರು, ಪ್ರಕಾಶಕರು ಹಾಗೂ ಆಸಕ್ತ ಸಾರ್ವಜನಿಕರು ಪುಸ್ತಕ ನೀತಿಯಲ್ಲಿ ಅಳವಡಿಸಬೇಕಾದ ಅಂಶಗಳ ಬಗ್ಗೆ ತಮ್ಮ ಸಲಹೆ ಸೂಚನೆ ಮತ್ತು ಅಭಿಪ್ರಾಯಗಳನ್ನು ಫೆಬ್ರವರಿ 10 ರ ಒಳಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, 1ನೇ ಮಹಡಿ, ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು ವಿಳಾಸಕ್ಕೆ ಅಥವಾ ಪ್ರಾಧಿಕಾರದ ಇ-ಮೇಲ್ kannadappradhikara@gmail.com ಮೂಲಕವೂ ಕಳುಹಿಸಬಹುದಾಗಿದೆ ಎಂದು ಪ್ರಾಧಿಕಾರದ ಆಡಳಿತಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.