ವಿದ್ಯಾರ್ಥಿಗಳು ತಾಂತ್ರಿಕ ಕೌಶಲ್ಯಗಳನ್ನು ನಿರಂತರವಾಗಿ ಅಭಿವೃದ್ಧಿ ಪಡಿಸಿಕೊಳ್ಳಬೇಕು: ಸುಯೋಗ್ ಶೆಟ್ಟಿ

ಉನ್ನತಿ ಕರಿಯರ್ ಅಕಾಡೆಮಿ: ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ, ವಿಚಾರ ಸಂಕಿರಣ

ಉಡುಪಿ: ಕೌಶಲ್ಯಾಭಿವೃದ್ಧಿ ತರಬೇತಿಗಳಿಗೆ ಪ್ರಸಿದ್ಧ ಸಂಸ್ಥೆಯಾಗಿರುವ ಹಾಗೂ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ತರಬೇತಿ ಪಾಲುದಾರ ಸಂಸ್ಥೆಯಾದ ಉನ್ನತಿ ಕರಿಯರ್ ಅಕಾಡೆಮಿಯಲ್ಲಿ ಕಂಪ್ಯೂಟರ್ ಲ್ಯಾಬ್ ಉದ್ಘಾಟನೆ ಹಾಗೂ ‘ಐಟಿ ಕ್ಷೇತ್ರದ ಭವಿಷ್ಯ ಮತ್ತು ಉದ್ಯೋಗಾವಕಾಶಗಳು’ ವಿಷಯದ ವಿಚಾರ ಸಂಕಿರಣ ಆಯೋಜಿಸಲಾಗಿತ್ತು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗೂಗಲ್ ಕ್ಲೌಡ್ ನ ಅತಿ ದೊಡ್ಡ ಪಾಲುದಾರ ಸಂಸ್ಥೆಗಳಲ್ಲೊಂದಾದ ನೀವಿಯಸ್ ಸೊಲ್ಯೂಷನ್ಸ್ ಪ್ರೈ ಲಿ ನ ಸಿಇಒ ಸುಯೋಗ್ ಶೆಟ್ಟಿ ಮಾತನಾಡಿ, “ವಿದ್ಯಾರ್ಥಿಗಳು ಐಟಿ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಿಕೊಳ್ಳಲು ನಿರಂತರ ತಾಂತ್ರಿಕ ಕೌಶಲ್ಯಗಳನ್ನು ಅಭಿವೃದ್ಧಿ ಪಡಿಸಿಕೊಳ್ಳುತ್ತಾ ಇರಬೇಕು ಹಾಗೂ ಯಾವುದೇ ಒಂದು ಕ್ಷೇತ್ರದಲ್ಲಿ ಆಳ ಅಧ್ಯಯನ ನಡೆಸಿ ತಜ್ಞ ಉದ್ಯೋಗಿಗಳಾಗುವ ಪ್ರಯತ್ನ ಮಾಡಬೇಕು. ಕಾಲೇಜಿನಲ್ಲಿ ಕಲಿತ ವಿಷಯಗಳಷ್ಟೇ ಸಾಲದು, ಮುಂದಿನ 5-10 ವರ್ಷಗಳಲ್ಲಿ ಉತ್ತಮ ಉದ್ಯೋಗಾವಕಾಶದ ಕ್ಷೇತ್ರಗಳಲ್ಲಿ ಪರಿಣತಿ ಪಡೆಯಬೇಕು. ಇಂತಹ ಪ್ರಯತ್ನವನ್ನು ಉನ್ನತಿ ಸಂಸ್ಥೆ ಒದಗಿಸುತ್ತಿರುವುದು ನಿಜಕ್ಕೂ ಉತ್ತಮ ಹೆಜ್ಜೆ. ಹೀಗಾದಾಗ ಮಾತ್ರ ತಮ್ಮ ಓದು ಹಾಗೂ ಐಟಿ ಕ್ಷೇತ್ರದ ಅವಶ್ಯಕತೆಯನ್ನು ಪೂರೈಸಲು ಸಾಧ್ಯ. ಈ ಪ್ರಯತ್ನದಲ್ಲಿ ನಮ್ಮ ಸಂಸ್ಥೆಯು ಉನ್ನತಿ ಸಂಸ್ಥೆಯೊಂದಿಗೆ ಕೈಜೋಡಿಸಲು ತಯಾರಾಗಿದೆ” ಎಂದರು.

ಸಂಸ್ಥೆಯ ಸ್ಥಾಪಕ ಪ್ರೇಮ್ ಪ್ರಸಾದ್ ಶೆಟ್ಟಿ ಮಾತನಾಡಿ, “ಕಾಲೇಜು ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಕೈಗಾರಿಕೆಗಳ ಅನುಭವವೂ ಸಿಗುವಂತಾಗಬೇಕು. ಆಗ ಮಾತ್ರ ಉತ್ತಮ ಉದ್ಯೋಗಾವಕಾಶ ಪಡೆದು ಭವಿಷ್ಯ ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ. ಇಂತಹ ಪ್ರಯತ್ನವನ್ನು ಉನ್ನತಿ ಸಂಸ್ಥೆ ನಿರಂತರವಾಗಿ ಮಾಡುತ್ತಿದೆ”ಎಂದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕಿ ಶ್ರೀಮತಿ ಪೌರ್ಣಮಿ ಪ್ರೇಮ್ ಶೆಟ್ಟಿ, ತರಬೇತುದಾರರಾದ ನವೀನ್ ನಾಯಕ್, ಸುಪ್ರೀತ, ಐನೀಶ್, ಲಾಕ್ಸಿನ್, ರಾಜೇಶ್, ಯೋಗಿತ ಉಪಸ್ಥಿತರಿದ್ದರು. ವಿಚಾರ ಸಂಕಿರಣದಲ್ಲಿ ಡಾ.ಟಿ ಎಂ ಎ ಪೈ ಪಾಲಿಟೆಕ್ನಿಕ್ ಮಣಿಪಾಲ, ಡಾ.ಜಿ.ಶಂಕರ್ ಸರ್ಕಾರಿ ಮಹಿಳಾ ಕಾಲೇಜು, ಪಿಪಿಸಿ ಕಾಲೇಜು, ಭುವನೇಂದ್ರ ಕಾಲೇಜು ಕಾರ್ಕಳ, ಮಿಲಾಗ್ರೀಸ್ ಕಾಲೇಜು, ನಿಟ್ಟೆ ಪದವಿ ಕಾಲೇಜು, ತೆಂಕನಿಡಿಯೂರು ಸರ್ಕಾರಿ ಪ್ರಥಮ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.