ಉಡುಪಿ: ‘ಸ್ಟಾರ್ ಮ್ಯೂಸಿಕ್ ಕೋಸ್ಟಲ್ ಸ್ಟುಡಿಯೋ’ ಉದ್ಘಾಟನೆ

ಉಡುಪಿ: ಸುಮಧುರ ಸಂಗೀತಕ್ಕೆ ಮನುಷ್ಯನ ಎಲ್ಲಾ ದುಃಖಗಳನ್ನು ದೂರ ಮಾಡುವ ಶಕ್ತಿ ಇದೆ. ಸಂಗೀತ ಅಭ್ಯಾಸದಿಂದ ಆರೋಗ್ಯ ವೃದ್ಧಿಯಾಗಿ ನೆಮ್ಮದಿ ದೊರೆಯುತ್ತದೆ. ಕಲೆಗಾರ ಬದುಕಿದರೆ ಕಲೆ ಉಳಿಯುತ್ತದೆ. ಯುವ ಬಾಲ ಪ್ರತಿಭೆಗಳನ್ನು ಸಂಸ್ಥೆ ಪೋಷಿಸಲಿ ಎಂದು ಉಡುಪಿ ಕಡಿಯಾಳಿಯಲ್ಲಿ ನೂತನವಾಗಿ ಆರಂಭಗೊಂಡ ಹವಾನಿಯಂತ್ರಿತ ‘ಸ್ಟಾರ್ ಮ್ಯೂಸಿಕ್ ಕೋಸ್ಟಲ್ ಸ್ಟುಡಿಯೋ’ ಉದ್ಘಾಟಿಸಿ ಕಿಶೋರ್ ಕುಮಾರ್ ಅಭಿಪ್ರಾಯಪಟ್ಟರು. ಸಂಗೀತ ವಿದ್ವಾನ್ ಗುರುದಾಸ್ ಶೆಣೈ ಮಾತನಾಡಿ, ಹಿಂದೂಸ್ತಾನಿ, ಕರ್ನಾಟಕ, ಶಾಸ್ತ್ರೀಯ ಸಂಗೀತದ ಕಲೆಯ ಬೆಳವಣಿಗೆಗೆ ಆಧುನಿಕ ಶೈಲಿಯ ಸ್ಟುಡಿಯೋದ ಅಗತ್ಯದ ಬಗ್ಗೆ ತಿಳಿಸಿದರು.

ಖ್ಯಾತ ಗಾಯಕ ರವೀಂದ್ರ ಪ್ರಭು ಮಾತನಾಡಿ, ಇಲ್ಲಿನ ಕಲಾವಿದರು ಸ್ಥಳೀಯ ಆರ್ಕೆಸ್ಟ್ರಾಗಳಲ್ಲಿ ಹಾಡಿ ಉತ್ತಮ ಹೆಸರು ಹೊಂದಿದ್ದಾರೆ. ನೂರಾರು ಯುವ ಪ್ರತಿಭೆಗಳುಈ ಸಂಸ್ಥೆಯ ಮೂಲಕ ಬೆಳೆದು ನಾಡಿಗೆ ಕೀರ್ತಿ ತರಲಿ ಎಂದು ಹಾರೈಸಿದರು.

ಸ್ಟುಡಿಯೋ ಸ್ಥಾಪಕ ಪ್ರಕಾಶ್ ಕಾಮತ್ ಮಾತನಾಡಿ, ಕೋಸ್ಟಲ್ ಸ್ಟಾರ್ ಮ್ಯೂಸಿಕ್ ಕ್ಲಬ್ ಮಣಿಪಾಲ ಹತ್ತಾರು ಸಮಾನ ಮನಸ್ಕರ ಸಹಕಾರದಲ್ಲಿ ಕಲೆಗೆ ಪ್ರೋತ್ಸಾಹ, ಯುವ ಪ್ರತಿಭೆಗಳಿಗೆ ತರಬೇತಿ ನೀಡುವ ಉದ್ದೇಶದಿಂದ ಸ್ಟಾರ್ ಮ್ಯೂಸಿಕ್ ಕೋಸ್ಟಲ್ ಸ್ಟುಡಿಯೋ ಸ್ಥಾಪನೆ ಮಾಡಿದೆ. ಇಲ್ಲಿ ಮಕ್ಕಳಿಗೆ ತಬಲಾ, ಹಾರ್ಮೊನಿಯೋಮ್, ಗಿಟಾರ್, ಕೊಳಲು, ವಿವಿಧ ರೀತಿಯ ಸಂಗೀತ ತರಬೇತಿ ನೀಡಲಾಗುವುದು. ಪ್ರತಿ ವಾರ ಸಂಸ್ಥೆಯ ಸದಸ್ಯರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದರು. ಸಮಾರಂಭದಲ್ಲಿ ಟಿ. ರಂಗ ಪೈ , ಶ್ರುತಿ ಶಣೈ, ಶಾಲಿನಿ ವಿಜೇಂದ್ರ, ಗಣ್ಯರು ಉಪಸ್ಥರಿದ್ದರು.

ಕಲಾವಿದ ಸತೀಶ್ಚಂದ್ರ ಸ್ವಾಗತಿಸಿದರು. ಅಮಿತಾಂಜಲಿ ಕಿರಣ್ ನಿರೂಪಿಸಿದರು.
ಪ್ರಕಾಶ್ ಕಾಮತ್ ವಂದಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ವಿದ್ವಾನ್ ಗುರುದಾಸ್ ಶೆಣೈ, ಹಿನ್ನೆಲೆ ಗಾಯಕ ರವೀಂದ್ರಪ್ರಭು , ದೇವಾನಂದ ಗಾಂವ್ಕರ್, ಶ್ರೀನಿವಾಸ ಭಾಗವತ್ ಮತ್ತು ರೋಹಿತ್ ಕಾಮತ್ ಇವರಿಂದ ಭಜನಾಮೃತ ನೇರವೇರಿತು.ಕೋರ್ ಕಮಿಟಿಯ ಸದಸ್ಯರು ಹಾಗೂ ಕ್ಲಬ್ ನ ಸದಸ್ಯರು, ಸಂಗೀತ ಅಭಿಮಾನಿಗಳು ಉಪಸ್ಥಿತರಿದ್ದರು.