ಸ್ನೇಹಿತರಿಗೆ ವಂಚಿಸಿ ಇನ್ನೋವಾ ಕಾರು ಕಳವು

ಉಡುಪಿ: ಮಣಿಪಾಲದ ವಿಜಯ ರೆಸಿಡೆನ್ಶಿಯ ಪಾರ್ಕಿಂಗ್‌ ಸ್ಥಳದಲ್ಲಿ ನಿಲುಗಡೆ ಮಾಡಲಾಗಿದ್ದ ಇನ್ನೋವಾ ಕಾರು ಕಳವು ಆಗಿರುವ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರಿನ ನಿವಾಸಿ ಬಿ. ಸತೀಶ್‌ ಕುಮಾರ್‌ ಎಂಬುವವರು ತಮ್ಮ ಸಹೋದರರಾದ ಪ್ರಕಾಶ್‌, ಸುಭಾಷ್‌ ಹಾಗೂ ಗೆಳೆಯರಾದ ಶ್ರಾವಣ್‌ ಮತ್ತು ಕೆ. ಪ್ರತಾಪ್‌ ಅವರೊಂದಿಗೆ ಫೆ. 12ರಂದು ಬೆಂಗಳೂರಿನಿಂದ ಹೊರಟು ಹಾಸನ, ಬೇಲೂರಿಗೆ ಹೋಗಿ ನಂತರ ಮಣಿಪಾಲದ ವಿಜಯ ರೆಸಿಡೆನ್ಸಿಗೆ ಬಂದು ರೂಂ ಮಾಡಿದ್ದರು. ಅಂದು ರಾತ್ರಿ ರೂಮ್‌ನ ಪಾರ್ಕಿಂಗ್‌ ಸ್ಥಳದಲ್ಲಿ ಕಾರನ್ನು ನಿಲ್ಲಿಸಿ, ಅವರೆಲ್ಲರೂ ಮಲಗಿದ್ದರು.
ಫೆ. 13ರಂದು ಮುಂಜಾನೆ 3 ಗಂಟೆಗೆ ಪ್ರತಾಪ್‌ ಎಂಬುವವನು ಎಲ್ಲರನ್ನೂ ಎಬ್ಬಿಸಿ ತಯಾರಾಗುವಂತೆ ತಿಳಿಸಿದನು. ಆದರೆ ಸ್ನೇಹಿತರೆಲ್ಲರೂ ತಯಾರಾಗುವಷ್ಟರಲ್ಲಿಯೇ ಪ್ರತಾಪ್‌ ಯಾರಿಗೂ ಮಾಹಿತಿ ನೀಡದೆ ಇನ್ನೋವಾ ಕಾರನ್ನು ಪಾರ್ಕಿಂಗ್‌ ಸ್ಥಳದಿಂದ ಕಳವು ಮಾಡಿದ್ದಾನೆ. ಕಾರಿನ ಅಂದಾಜು ಮೌಲ್ಯ 4.50 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ. ಸತೀಶ್‌ ಕುಮಾರ್‌ ನೀಡಿದ ದೂರಿನಂತೆ ಮಣಿಪಾಲ ಠಾಣೆಯಲ್ಲಿ ದೂರು
ದಾಖಲಾಗಿದೆ.