ಬೇಸಿಗೆಗೆ ಇಡ್ಲಿ, ದೋಸೆ, ವಡೆ ತಿನ್ನುವ ಮೊದಲು ಎಚ್ಚರಿಕೆ ಬೇಕೇ ಬೇಕು: ಇಡ್ಲಿ ತಿಂದು ಉದ್ಯೋಗಿಗಳು ಅಸ್ವಸ್ಥರಾದ ಪ್ರಕರಣ, ಈಗ ಹಲವು ಚರ್ಚೆಗೆ ಕಾರಣ!

ಬೆಂಗಳೂರು: ನಗರದ ಖಾಸಗಿ ಕಂಪನಿಯ ಕ್ಯಾಂಟೀನ್‌ನಲ್ಲಿ ಇಡ್ಲಿ, ವಡೆ ಹಾಗೂ ಸಾಂಬಾರ್-ಅನ್ನ ಸೇವಿಸಿದ ಬಳಿಕ 97 ಮಂದಿ ಉದ್ಯೋಗಿಗಳು ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ. ಈ ಘಟನೆಯ ಬಳಿಕ ಹುದುಗಿಸಿದ (fermented) ಆಹಾರಗಳ ಸುರಕ್ಷತೆ ಕುರಿತು ಚರ್ಚೆಗಳು ಮತ್ತೆ ಜೋರಾಗಿದೆ.

ಸಾಮಾನ್ಯವಾಗಿ ಇಡ್ಲಿ, ದೋಸೆ, ವಡೆಯಂತಹ ಹುದುಗಿಸಿದ ಆಹಾರ ಪದಾರ್ಥಗಳನ್ನು ಕರುಳಿನ ಆರೋಗ್ಯಕ್ಕೆ ಉತ್ತಮ, ಸುಲಭವಾಗಿ ಜೀರ್ಣವಾಗುವ ಆಹಾರವೆಂದು ಪರಿಗಣಿಸಲಾಗುತ್ತದೆ. ಆದರೆ ಬೇಸಿಗೆಯ ಹೆಚ್ಚಿನ ತಾಪಮಾನದಲ್ಲಿ ಇವುಗಳನ್ನು ಸರಿಯಾದ ರೀತಿಯಲ್ಲಿ ಸಂರಕ್ಷಿಸದಿದ್ದರೆ ಅಪಾಯ ಉಂಟಾಗಬಹುದು ಎಂಬುದನ್ನು ತಜ್ಞರು ಎಚ್ಚರಿಸಿದ್ದಾರೆ.

ಬೇಸಿಗೆಯಲ್ಲಿ ಹುದುಗಿಸಿದ ಆಹಾರಗಳಿಗೆ ಏಕೆ ಹೆಚ್ಚುವರಿ ಕಾಳಜಿ?

ಹುದುಗಿಸಿದ ಆಹಾರಗಳು ಬ್ಯಾಕ್ಟೀರಿಯಾ, ಯೀಸ್ಟ್ ಅಥವಾ ಶಿಲೀಂಧ್ರಗಳ ಕ್ರಿಯೆಯಿಂದ ರೂಪುಗೊಳ್ಳುತ್ತವೆ. ಈ ಪ್ರಕ್ರಿಯೆಯಲ್ಲಿ ನೈಸರ್ಗಿಕ ಸಕ್ಕರೆ ಮತ್ತು ಪಿಷ್ಟಗಳು ಆಮ್ಲಗಳು, ಅನಿಲಗಳು ಅಥವಾ ಇತರೆ ಸಂಯುಕ್ತಗಳಾಗಿ ಪರಿವರ್ತನೆಗೊಂಡು ಆಹಾರದ ರುಚಿ, ಪೌಷ್ಟಿಕಾಂಶ ಮತ್ತು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತವೆ. ಆದರೆ ಇದೇ ಪ್ರಕ್ರಿಯೆ ನಿಯಂತ್ರಣ ತಪ್ಪಿದರೆ ಆರೋಗ್ಯಕ್ಕೆ ಹಾನಿ ಉಂಟಾಗುವ ಸಾಧ್ಯತೆಯೂ ಇದೆ.

ಬೇಸಿಗೆಯಲ್ಲಿ ಎದುರಾಗುವ ಪ್ರಮುಖ ಅಪಾಯಗಳು

ವೇಗದ ಹುದುಗುವಿಕೆ:
ಹೆಚ್ಚಿನ ಉಷ್ಣತೆಯಿಂದ ಹುದುಗುವಿಕೆ ಪ್ರಕ್ರಿಯೆ ಸಾಮಾನ್ಯಕ್ಕಿಂತ ಬೇಗ ನಡೆಯುತ್ತದೆ. ಗಮನಿಸದೆ ಬಿಟ್ಟರೆ ಅತಿಯಾದ ಹುದುಗುವಿಕೆಯಿಂದ ಆಹಾರ ಹಾಳಾಗಬಹುದು.

ಬ್ಯಾಕ್ಟೀರಿಯಾ ಬೆಳವಣಿಗೆ:
ಶಾಖ ಮತ್ತು ತೇವಾಂಶವು ಹಾನಿಕಾರಕ ಸೂಕ್ಷ್ಮಜೀವಿಗಳಿಗೆ ಅನುಕೂಲಕರ ಪರಿಸರ ಒದಗಿಸುತ್ತದೆ. ಇದರಿಂದ ಆಹಾರ ವಿಷಾಹಾರ (Food Poisoning) ಉಂಟಾಗುವ ಸಾಧ್ಯತೆ ಹೆಚ್ಚುತ್ತದೆ.

ಕಡಿಮೆ ಬಾಳಿಕೆ ಅವಧಿ:
ಬೇಸಿಗೆಯಲ್ಲಿ ಇಂತಹ ಆಹಾರ ಪದಾರ್ಥಗಳು ಬೇಗನೆ ಹಾಳಾಗುವುದರಿಂದ ಅವುಗಳನ್ನು ದೀರ್ಘಕಾಲ ಉಳಿಸಿಕೊಳ್ಳುವುದು ಕಷ್ಟ. ತಾಜಾವಾಗಿಡಲು ಫ್ರಿಜ್‌ನಲ್ಲಿ ಇಡುವುದು ಅಗತ್ಯ.

ಕಲುಷಿತ ನೀರಿನ ಬಳಕೆ:
ಶೋಧಿಸದ ನೀರನ್ನು ಬಳಸಿದರೆ ಬ್ಯಾಕ್ಟೀರಿಯಾ ಹರಡುವ ಸಾಧ್ಯತೆ ಹೆಚ್ಚುತ್ತದೆ. ಆದ್ದರಿಂದ ಫಿಲ್ಟರ್ ಮಾಡಿದ ಅಥವಾ ಕುದಿಸಿದ ನೀರನ್ನು ಬಳಸುವುದು ಉತ್ತಮ.

ತಜ್ಞರ ಸಲಹೆ

ಬೇಸಿಗೆಯಲ್ಲಿ ಹುದುಗಿಸಿದ ಆಹಾರ ತಯಾರಿಸುವಾಗ ಸ್ವಚ್ಛತೆ, ಸರಿಯಾದ ಸಂಗ್ರಹಣೆ ಮತ್ತು ಸಮಯಕ್ಕೆ ತಿನ್ನುವಿಕೆ ಅತ್ಯಂತ ಮುಖ್ಯ. ಅನುಮಾನಾಸ್ಪದ ವಾಸನೆ ಅಥವಾ ರುಚಿ ಕಂಡುಬಂದರೆ ಆಹಾರ ಸೇವನೆ ತಪ್ಪಿಸುವುದು ಉತ್ತಮ ಎಂದು ಆರೋಗ್ಯ ತಜ್ಞರು ಸೂಚಿಸಿದ್ದಾರೆ.

ಈ ಘಟನೆ ಆಹಾರ ಸುರಕ್ಷತೆ ಕುರಿತು ಎಚ್ಚರಿಕೆಯ ಗಂಟೆಯಂತೆ ಪರಿಣಮಿಸಿದ್ದು, ವಿಶೇಷವಾಗಿ ಬೇಸಿಗೆಯಲ್ಲಿ ಆಹಾರದ ಗುಣಮಟ್ಟದ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯವಿದೆ.