ಔಷಧಿಗಳಿಗಾಗಿ ಭಾರತಕ್ಕೆ ಮನವಿ ಮಾಡಿದ ಶ್ರೀಲಂಕಾ ಕ್ರಿಕೆಟಿಗ ಸನತ್ ಜಯಸೂರ್ಯ

ದೆಹಲಿ: ಶ್ರೀಲಂಕಾದ ಮಾಜಿ ನಾಯಕ ಸನತ್ ಜಯಸೂರ್ಯ ಶ್ರೀಲಂಕಾದ ಭಾರತೀಯ ಹೈಕಮಿಷನರ್ ಗೋಪಾಲ್ ಬಾಗ್ಲೇ ಅವರನ್ನು ಭೇಟಿಯಾಗಿ ದ್ವೀಪ ರಾಷ್ಟ್ರಕ್ಕೆ ಅಗತ್ಯವಾದ ಔಷಧಿಗಳನ್ನು ಪೂರೈಸಲು ಭಾರತದ ಸಹಾಯವನ್ನು ಕೇಳಿದ್ದಾರೆ. ಗುರುವಾರ (ಏಪ್ರಿಲ್ 28) ಭಾರತೀಯ ಹೈಕಮಿಷನರ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಸನತ್ ಅವರು ಮನವಿ ಮಾಡಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ಶ್ರೀಲಂಕಾದ ನ್ಯೂಸ್‌ವೈರ್ ವರದಿ ಮಾಡಿದೆ. ಈ ಸಂದರ್ಭದಲ್ಲಿ ಔಷಧಿಗಳು ಸೇರಿದಂತೆ ಅಗತ್ಯ ಸಾಮಗ್ರಿಗಳ ರೂಪದಲ್ಲಿ ಭಾರತದ ಬೆಂಬಲವನ್ನು ಅವರು ಶ್ಲಾಘಿಸಿದ್ದಾರೆ.

“ಹೈ ಕಮಿಷನರ್ ಅವರು ಕ್ರಿಕೆಟ್ ದಂತಕಥೆ @Sanath07 ಅವರನ್ನು ಭೇಟಿ ಮಾಡಿದರು ಮತ್ತು ಕ್ರೀಡೆ ಮತ್ತು ಶ್ರೀಲಂಕಾಕ್ಕಾಗಿ ಅವರ ಅನೇಕ ಸಾಧನೆಗಳನ್ನು ಶ್ಲಾಘಿಸಿದರು. ನುರಿತ ಕ್ರಿಕೆಟಿಗ ಔಷಧಿಗಳು ಸೇರಿದಂತೆ ಅಗತ್ಯ ಸಾಮಗ್ರಿಗಳ ರೂಪದಲ್ಲಿ ಭಾರತದ ಬೆಂಬಲವನ್ನು ಶ್ಲಾಘಿಸಿದರು, ”ಎಂದು ಶ್ರೀಲಂಕಾದಲ್ಲಿನ ಭಾರತೀಯ ಹೈ ಕಮಿಷನ್ ಟ್ವೀಟ್ ಮಾಡಿದೆ.

ಅಗತ್ಯ ಕ್ಯಾನ್ಸರ್ ಔಷಧಿಗಳು ಮತ್ತು ಇತರ ಜೀವ ಉಳಿಸುವ ಔಷಧಿಗಳಿಗಾಗಿ ಜಯಸೂರ್ಯ ಮನವಿ ಮಾಡಿದ್ದರು. ಸ್ವಾತಂತ್ರ್ಯದ ನಂತರದ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ದ್ವೀಪ ರಾಷ್ಟ್ರಕ್ಕೆ ಸಹಾಯ ಹಸ್ತ ಚಾಚಿದ್ದಕ್ಕಾಗಿ ‘ದೊಡ್ಡ ಸಹೋದರ’ ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಶ್ಲಾಘಿಸಿದ್ದಾರೆ.