ಉಡುಪಿ: ಸಂಸ್ಕೃತ ಅಧ್ಯಯನದಿಂದ ಸ್ಪಷ್ಟ ಉಚ್ಚಾರ ಹಾಗೂ ಶಬ್ದದ ನಿರ್ವಚನ ಸಾಧ್ಯ ಎಂದು ಅದಮಾರು ಮಠದ ವಿಶ್ವಪ್ರಿಯ ಸ್ವಾಮೀಜಿ ಹೇಳಿದರು.
ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ 2019–20ನೇ ಸಾಲಿನ ಸಂಸ್ಕೃತೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ವಾದಿರಾಜ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕ ವಿದ್ವಾನ್ ಬಿ. ಗೋಪಾಲಾಚಾರ್ ಮಾತನಾಡಿ, ಕಲಿತ ವಿದ್ಯೆ ಪುಸ್ತಕದಲ್ಲಿ ಇರಬೇಕು. ವಿದ್ಯಾರ್ಥಿಗಳ ಯಶಸ್ಸು ಗುರುಗಳ ಅನುಗ್ರಹದಲ್ಲಿದೆ ಎಂದು ಹೇಳಿದರು. ಕಾಲೇಜಿನ ಆಡಳಿತ ಮಂಡಳಿಯ ಕಾರ್ಯದರ್ಶಿ ಪ್ರದೀಪ್ ಕುಮಾರ್ ಮಾತನಾಡಿ, ಭಾರತೀಯ ಪ್ರಾಚೀನ ಭಾಷೆಯಾದ ಸಂಸ್ಕೃತ ಭಾಷೆಯ ಅಧ್ಯಯನಕ್ಕೆ ಇಂದು ಹೆಚ್ಚಿನ ಒತ್ತು ನೀಡುವ ಅಗತ್ಯವಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಸಂದೀಪ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಆಡಳಿತ ಮಂಡಳಿಯ ಕೋಶಾಧಿಕಾರಿ ಪ್ರವೀಣ್ ಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಸುಮೇಧಾ ಭಟ್ ಸ್ವಾಗತಿಸಿದರು. ಜಾಗೃತಿ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಸ್ಮೃತಿ ಎ. ರಾವ್ ವಂದಿಸಿದರು.












