ಎಡನೀರು ಮಠದ ಉತ್ತರಾಧಿಕಾರಿಯಾಗಿ ಸಚ್ಚಿದಾನಂದ ಭಾರತೀ ಸ್ವಾಮೀಜಿ ಪೀಠಾರೋಹಣ: ರಾಜ್ಯ ಸರ್ಕಾರದಿಂದ ಗೌರವ ಸಮರ್ಪಣೆ

ಉಡುಪಿ: ಕಾಸರಗೋಡಿನ ಸಮೀಪದ ಪ್ರಾಚೀನ‌ಧರ್ಮಪೀಠ ಶ್ರೀ ಎಡನೀರು ಮಠದ ನೂತನ ಉತ್ತರಾಧಿಕಾರಿಯಾಗಿ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಪೀಠಾರೋಹಣ ಸಮಾರಂಭ ಬುಧವಾರ ಮಠದಲ್ಲಿ ವೈಭವದಿಂದ ನೆರವೇರಿತು.

ಶ್ರೀಕಂಚಿ ಮಠದ ವೈದಿಕರ ಹಾಗೂ ಶ್ರೀ ಮಠದ ವೈದಿಕರ ನೇತೃತ್ವದಲ್ಲಿ ವಿವಿಧ ಯಾಗ ಹೋಮ ಸಹಿತ ಧಾರ್ಮಿಕ ವಿಧಿವಿಧಾನಗಳು ಜರಗಿತು. ಬಳಿಕ ವೇದಘೋಷ ವಾದ್ಯಗಳ ಸಹಿತ ಶ್ರೀಗಳವರ ಪೀಠಾರೋಹಣ ಪಟ್ಟಾಭಿಷೇಕ ಸಮಾರಂಭ ನೆರವೇರಿತು.

ಶ್ರೀಕ್ಷೇತ್ರ ಧರ್ಮಸ್ಥಳ, ಪೇಜಾವರ ಮಠ ಸಹಿತ ಕರ್ನಾಟಕ ಹಾಗೂ ಕೇರಳ ರಾಜ್ಯಗಳ ವಿವಿಧ ಮಠ ಸಂಸ್ಥಾನಗಳ ವತಿಯಿಂದ ನೂತನ ಶ್ರೀಗಳವರಿಗೆ ಪಟ್ಟದ ಗೌರವಗಳು ಸಮರ್ಪಣೆಯಾಯಿತು .
ಕರ್ನಾಟಕ ರಾಜ್ಯ ಸರಕಾರದ ಪರವಾಗಿ ಹಿಂದೂ ಧಾರ್ಮಿಕ ದತ್ತಿ, ಮುಜರಾಯಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮಾರಂಭದಲ್ಲಿ ಭಾಗವಹಿಸಿ, ಭಕ್ತಿ ಗೌರವ ಸಹಿತ ಮುಖ್ಯಮಂತ್ರಿಯವರ ಶುಭ ಸಂದೇಶವನ್ನು ಅರ್ಪಿಸಿದರು‌.

ಕೇಂದ್ರದ ಸರಕಾರದ ಪರವಾಗಿ ರಸಗೊಬ್ಬರ ಮತ್ತು ರಾಸಾಯನಿಕ ಖಾತೆ ಸಚಿವ ಡಿ.ವಿ. ಸದಾನಂದ ಗೌಡ, ಸಂಸದೀಯ ವ್ಯವಹಾರ ಮತ್ತು ಗಣಿ ಖಾತೆ ಮಂತ್ರಿಗಳಾದ ಪ್ರಹ್ಲಾದ್ ಜೋಷಿಯವರು ಕಳಿಸಿದ ಶುಭಸಂದೇಶ ಪತ್ರಗಳನ್ನೂ ಸಚಿವ ಕೋಟ ಹಸ್ತಾಂತರಿಸಿದರು.

ವಿಶ್ವ ಹಿಂದು ಪರಿಷತ್ತಿನ ಪರವಾಗಿ ರಾಷ್ಟ್ರೀಯ ಉಪಾಧ್ಯಕ್ಷ ಜೀವೇಶ್ವರ ಮಿಶ್ರ ಅವರು ಕಳಹಿಸಿದ ಸಂದೇಶವನ್ನು ಪೇಜಾವರ ಮಠದ ದಿವಾನರಾದ ಎಂ. ರಘುರಾಮಾಚಾರ್ಯರು ಸಲ್ಲಿಸಿದರು . ಪೇಜಾವರ ಮಠದ ಸಿಇಒ ಸುಬ್ರಹ್ಮಣ್ಯ ಭಟ್ , ಎಸ್.ವಿ. ಭಟ್, ವಾಸುದೇವ ಭಟ್ ಪೆರಂಪಳ್ಳಿ ಉಪಸ್ಥಿತರಿದ್ದರು .