ಕಿನ್ನಿಮೂಲ್ಕಿ: ಅಕಸ್ಮಾತ್ ಆಗಿ ಬಾವಿಗೆ ಬಿದ್ದವರಿಬ್ಬರ ರಕ್ಷಣೆ

ಕಿನ್ನಿಮೂಲ್ಕಿ: ಆಕಸ್ಮಿಕವಾಗಿ ಬಾವಿಗೆ ಬಿದ್ದ ಬಾಲಕನನ್ನು ಮೇಲಕ್ಕೆತ್ತಲು ಹಾರಿದ ಯುವಕನೂ ಮೇಲೆ ಬರಲಾಗದ ಘಟನೆಯೊಂದು ಕಿನ್ನಿಮೂಲ್ಕಿಯಲ್ಲಿ ನಡೆದಿದೆ.

ಕಿನ್ನಿಮೂಲ್ಕಿಯ ಕಾರ್ಮಿಕರ ಕಾಲನಿಯ 16 ವರ್ಷದ ಬಾಲಕ ಆಕಸ್ಮಿಕವಾಗಿ ಬಾವಿಗೆ ಬಿದ್ದಿದ್ದಾನೆ. ಇದನ್ನು ನೋಡಿದ 34 ವರ್ಷದ ಯುವಕ ಬಾಲಕನನ್ನು ರಕ್ಷಿಸಲೆಂದು ಬಾವಿಗೆ ಹಾರಿದ್ದಾನೆ. ಸುಮಾರು 8 ಅಡಿ ಸುತ್ತಳತೆ, 35 ಅಡಿ ಆಳದ ಬಾವಿ ಇದಾಗಿದ್ದು, ಬಾವಿಯಲ್ಲಿ 5 ಅಡಿಗಳಷ್ಟು ನೀರಿತ್ತು. ಬಿದ್ದವರಿಬ್ಬರಿಗೂ ಮೇಲೆ ಬರಲು ಸಾಧ್ಯವಾಗಿರಲಿಲ್ಲ. ಇವರಿಬ್ಬರನ್ನೂ ದೂರದಿಂದ ಗಮನಿಸಿದ್ದ ವ್ಯಕ್ತಿಯೊಬ್ಬರು ಕೂಡಲೇ ಅಗ್ನಿಶಾಮಕದಳಕ್ಕೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕದಳದ ಸಿಬಂದಿ ಇಬ್ಬರನ್ನೂ ರಕ್ಷಿಸಿದ್ದಾರೆ. ರಕ್ಷಣಾ ಕಾರ್ಯದಲ್ಲಿ ಸತೀಶ್‌, ಆಲ್ವಿನ್‌, ಪ್ರಶಾಂತ್‌, ಮಂಜುನಾಥ್‌, ಸುಭಾಷ್‌, ರಾಕೇಶ್‌ ಸಹಕರಿಸಿದರು.