ಉಡುಪಿ: ಹೂವು, ಹಣ್ಣು , ತರಕಾರಿ ಬೆಳೆಗಾರರಿಗೆ ಪರಿಹಾರ..

ಉಡುಪಿ ಮೇ 28: ಕೋವಿಡ್-19 ರ ಎರಡನೆ ಅಲೆ ಕಾರಣ ರಾಜ್ಯದಲ್ಲಿ ವಿಧಿಸಿರುವ ಜನತಾ ಕರ್ಪ್ಯೂ ಅವಧಿಯಲ್ಲಿ ಹೂವು, ಹಣ್ಣು ಹಾಗೂ ತರಕಾರಿ ಬೆಳೆಗಾರರಿಗೆ ಉಂಟಾದ ನಷ್ಟಕ್ಕೆ ಹೆಕ್ಟೇರ್ ರೂ.10,000 ಪರಿಹಾರವನ್ನು ಗರಿಷ್ಟ 1 ಹೆಕ್ಟೇರ್ ಗೆ ಹಾಗೂ ಕನಿಷ್ಟ ರೂ.2000 ಕ್ಕೆ ಮಿತಿಗೊಳಿಸಿ ವಿತರಿಸಲಾಗುವುದು.

ವಾರ್ಷಿಕ ಹೂವು, ಹಣ್ಣು ಮತ್ತು ತರಕಾರಿ ಬೆಳೆಗಳಿಗೆ 2021-22 ನೇ ಸಾಲಿನ ಬೇಸಿಗೆ ಬೆಳೆ ಸಮೀಕ್ಷೆ ಹಾಗೂ ಬಹುವಾರ್ಷಿಕ ಬೆಳೆಗಳಿಗೆ 2021-22 ನೇ ಸಾಲಿನ ಮುಂಗಾರು ಬೆಳೆ ಸಮೀಕ್ಷೆ ಮಾಹಿತಿಯ ಆಧಾರದಲ್ಲಿ ಪಾವತಿಸಲು ಸರ್ಕಾರದ ಸೂಚನೆಯಿದ್ದು, ಬೆಳೆಸಮೀಕ್ಷೆಯಲ್ಲಿ ನಮೂದಾಗಿರುವ ಹಾಗೂ ಇಲಾಖೆಯ ತಂತ್ರಾoಶದಲ್ಲಿ ನೊಂದಣಿಯಾಗಿರುವ ಹಾಗೂ ನೊಂದಣಿಯಾಗದೆ ಇರುವ ರೈತರ ವಿವರಗಳು ತೋಟಗಾರಿಕೆ ಇಲಾಖಾ ಕಛೇರಿಗಳಲ್ಲಿ ಲಭ್ಯವಿರುತ್ತದೆ.

ರೈತರು ಈಗಾಗಲೇ ಇಲಾಖೆಯ FRUITS ತಂತ್ರಾoಶದಲ್ಲಿ ನೊಂದಣಿಯಾಗಿದ್ದರೆ ಅರ್ಹ ರೈತರಿಗೆ ಪರಿಹಾರವನ್ನು ನೇರವಾಗಿ ಪಾವತಿಸಲಾಗುವುದು. FRUITS ತಂತ್ರಾoಶದಲ್ಲಿ ನೋಂದಣಿಯಾಗದೇ ಇರುವ ರೈತರು ತಮ್ಮಆಧಾರ್ ನ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕದ ಪ್ರತಿ ಹಾಗೂ ಮೊಬೈಲ್‌ ಸಂಖ್ಯೆಯ ವಿವರಗಳನ್ನು ತಾಲೂಕು ತೋಟಗಾರಿಕೆ ಇಲಾಖೆಯ ಕಛೇರಿಗೆ ಸಲ್ಲಿಸುವುದು.

ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಜಿಲ್ಲಾಅಥವಾ ಸಂಬoಧಿಸಿದ ತಾಲೂಕು ಮಟ್ಟದ ಕಛೇರಿಯನ್ನು ಹಾಗೂ ಜಿಲ್ಲೆಯ ವಿವಿಧ ತೋಟಗಾರಿಕೆ ಇಲಾಖಾ ಕಚೇರಿಗಳ ದೂರವಾಣಿ ಸಂಖ್ಯೆ: ತೋಟಗಾರಿಕೆ ಉಪನಿರ್ದೇಶಕರು (ಜಿ.ಪಂ.), ಉಡುಪಿ ಜಿಲ್ಲೆ: 0820-2531950, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಉಡುಪಿ ತಾಲೂಕು: 0820-2522837, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.),ಕುoದಾಪುರ ತಾಲೂಕು: 08254-230813, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.), ಕಾರ್ಕಳ ತಾಲೂಕು: 08258-230288 ನ್ನು ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.