ನೈಟ್ ಕರ್ಪ್ಯೂ ಮಾರ್ಗಸೂಚಿ ಬಿಡುಗಡೆ: ಯಾವುದಕ್ಕೆಲ್ಲ ಅವಕಾಶ?, ಯಾವುದಕ್ಕಿಲ್ಲ?

ಬೆಂಗಳೂರು: ರಾಜ್ಯದಲ್ಲಿ ಉಲ್ಬಣಿಸುತ್ತಿರುವ ಕೋವಿಡ್ ಎರಡನೆ ಅಲೆ ತಡೆಗೆ ಶನಿವಾರದಿಂದ (ಏ.10ರಿಂದ 20ರ ವರೆಗೆ) ಉಡುಪಿ, ಮಣಿಪಾಲ, ಮಂಗಳೂರು, ಬೆಂಗಳೂರು ಸಹಿತ ರಾಜ್ಯದ 8 ನಗರಗಳಲ್ಲಿ ರಾತ್ರಿ 10ರಿಂದ ಬೆಳಿಗ್ಗೆ 5 ಗಂಟೆಯವರೆಗೆ ಕೊರೊನಾ ಕರ್ಫ್ಯೂ (ರಾತ್ರಿ ಕರ್ಪ್ಯೂ) ಹೇರಲಾಗುತ್ತಿದ್ದು, ಈ ಅವಧಿಯಲ್ಲಿ ವೈದ್ಯಕೀಯ ಸೇವೆ ಮತ್ತು ತುರ್ತು ಚಟುವಟಿಕೆಗೆ ಮಾತ್ರ ಅನುಮತಿ ನೀಡಲಾಗಿದೆ. ಉಳಿದಂತೆ ಎಲ್ಲ ವಾಣಿಜ್ಯ ಚಟುವಟಿಕೆಯನ್ನು ರಾಜ್ಯ ಸರ್ಕಾರ ನಿರ್ಬಂಧಿಸಿದೆ.

ಈ ಬಗ್ಗೆ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್‌ ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಉಡುಪಿ–ಮಣಿಪಾಲ, ಬೆಂಗಳೂರು ನಗರ, ಮೈಸೂರು, ಮಂಗಳೂರು, ಬೀದರ್‌, ಕಲಬುರ್ಗಿ ಮತ್ತು ತುಮಕೂರು ನಗರಗಳಲ್ಲಿ ರಾತ್ರಿ ಕರ್ಪ್ಯೂ ಜಾರಿಯಲ್ಲಿ ಇರಲಿದೆ.

ಯಾವುದಕ್ಕೆ ಅವಕಾಶ.? ಯಾವುದಕ್ಕಿಲ್ಲ?:
ಬಸ್ಸು, ರೈಲು ಹಾಗೂ ವಿಮಾನದ ದೂರ ಪ್ರಯಾಣಕ್ಕೆ ಅನುಮತಿ ನೀಡಲಾಗಿದೆ. ಆದರೆ, ಪ್ರಯಾಣಿಕರು ಮನೆಯಿಂದ ನಿಲ್ದಾಣಗಳಿಗೆ ಮತ್ತು ನಿಲ್ದಾಣಗಳಿಂದ ಮನೆಗೆ ಅಧಿಕೃತ ಟಿಕೆಟ್ ಆಧಾರದ ಮೇಲೆ ಆಟೊ, ಕ್ಯಾಬ್‌ ಮತ್ತಿತರ ವಾಹನದ ಮೂಲಕ ಸಂಚರಿಸಬಹುದು.

ವಿವಿಧ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಮತ್ತು ಅವರ ಸಹಾಯಕರಿಗೆ ವೈದ್ಯಕೀಯ ಸೇವೆಗಾಗಿ ಸಂಚರಿಸಲು ಅನುಮತಿ ನೀಡಲಾಗಿದೆ. ಅತ್ಯಾವಶ್ಯಕ ಸೇವೆಗಳನ್ನು ಒದಗಿಸುವ ಹಾಗೂ ಸರಕು ಸಾಗಣೆ ವಾಹನಗಳು, ಹೋಮ್‌ ಡೆಲಿವರಿ, ಇ– ಕಾಮರ್ಸ್‌ ಮತ್ತು ಖಾಲಿ ವಾಹನಗಳ ಸಂಚಾರಕ್ಕೂ ಮಾತ್ರ ಅನುಮತಿ ನೀಡಲಾಗಿದೆ.

ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುವ ಎಲ್ಲ ಕಾರ್ಖಾನೆಗಳು, ಕಂಪನಿಗಳು ಹಾಗೂ ಸಂಸ್ಥೆಗಳು ಯಾಥಾರೀತಿಯಲ್ಲಿ ಕಾರ್ಯ ನಿರ್ವಹಿಸಲು ಅನಮತಿ ನೀಡಲಾಗಿದೆ. ಆದರೆ, ಸಂಬಂಧಿಸಿದ ಕಾರ್ಮಿಕರು, ನೌಕರರು ಕೊರೊನಾ ಕರ್ಪ್ಯೂ ಅವಧಿಗೆ ಮೊದಲೇ ಕರ್ತವ್ಯಕ್ಕೆ ಹಾಜರಿರಬೇಕು ಎಂಬ ಷರತ್ತು ವಿಧಿಸಲಾಗಿದೆ.

ಈ ಆದೇಶವನ್ನು ಬಿಬಿಎಂಪಿ, ಪೊಲೀಸ್‌ ಆಯುಕ್ತರು ಮತ್ತು ಸಂಬಂಧಿಸಿದ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಆದೇಶ ಪಾಲನೆಯಲ್ಲಿ ಲೋಪವಾದರೆ ಅಂಥವರ ವಿರುದ್ಧ ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕ್ರಮ ತೆಗೆದುಕೊಳ್ಳಲಾಗುವುದು ಎಂದೂ ಎಚ್ಚರಿಕೆ ನೀಡಿದ್ದಾರೆ.