ಅಮೃತ್‌ ಭಾರತ್‌ ಯೋಜನೆಯಡಿ ಉಡುಪಿ ರೈಲ್ವೆ ನಿಲ್ದಾಣದ ಪುನರ್ ಅಭಿವೃದ್ಧಿ

ನವದೆಹಲಿ: ಭಾರತೀಯ ರೈಲ್ವೆ ನಿಲ್ದಾಣಗಳ ಪುನರ್ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಘೋಷಣೆ ಮಾಡಿರುವ “ಅಮೃತ್‌ ಭಾರತ್‌ ಯೋಜನೆ”ಗೆ ಉಡುಪಿಯ ರೈಲು ನಿಲ್ದಾಣ ಸೇರ್ಪಡೆಯಾಗಿರುವುದಾಗಿ ವರದಿ ತಿಳಿಸಿದೆ.

ಉಡುಪಿಯ ರೈಲು ನಿಲ್ದಾಣ ಕೊಂಕಣ್‌ ರೈಲ್ವೆ ಕಾರ್ಪೋರೇಶನ್‌ ಲಿಮಿಟೆಡ್‌ (KRCL) ವ್ಯಾಪ್ತಿಗೆ ಒಳಪಟ್ಟಿದೆ. ಇದೀಗ ಉಡುಪಿ ರೈಲು ನಿಲ್ದಾಣವನ್ನು ಅಮೃತ್‌ ಭಾರತ್‌ ಯೋಜನೆಗೆ ಸೇರ್ಪಡೆಗೊಳಿಸಿರುವ ಬಗ್ಗೆ ರೈಲ್ವೆ ಸಚಿವಾಲಯ ಕೆಆರ್‌ ಸಿಎಲ್‌ ಗೆ ಮಾಹಿತಿ ನೀಡಿರುವುದಾಗಿ ವರದಿ ಹೇಳಿದೆ.

ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ ಉಡುಪಿ ರೈಲು ನಿಲ್ದಾಣವನ್ನು ಪುನರಾಭಿವೃದ್ಧಿ ಮಾಡಬೇಕೆಂಬ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಅವರಿಗೆ ಸಚಿವೆ ಶೋಭಾ ಕರಂದ್ಲಾಜೆ ಅಭಿನಂದನೆ ಸಲ್ಲಿಸಿದ್ದಾರೆ.