ಸಾಲದ ಕಂತು ಮತ್ತೆ ಮುಂದೂಡಲು ಆರ್ ಬಿಐ ನಿರಾಕರಣೆ

ನವದೆಹಲಿ: ಸಾಲದ ಕಂತು ಮುಂದೂಡಲು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ನಿರಾಕರಿಸಿದೆ.

ಸಾಲದ ಕಂತನ್ನು ಆರು ತಿಂಗಳಿಗೂ ಹೆಚ್ಚು ಕಾಲ ವಿಸ್ತರಿಸುವುದಕ್ಕೆ ಸಾಧ್ಯವಿಲ್ಲ. ವಿಸ್ತರಿಸಿದರೆ ಸಾಲ ಪಾವತಿಸುವ ವ್ಯವಸ್ಥೆ ಹದಗೆಡಲಿದೆ. ಸಾಲದ ಪ್ರಮಾಣ ಹೆಚ್ಚಾಗಿ ಆರ್ಥಿಕತೆಯ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಲಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಆರ್ ಬಿಐ ತಿಳಿಸಿದೆ.

ಕೊರೊನಾ ಹಿನ್ನೆಲೆಯಲ್ಲಿ ವಿವಿಧ ವಲಯಗಳು ಸಂಕಷ್ಟಕ್ಕೆ ಸಿಲುಕಿದ್ದರಿಂದ ಸಾಲ ಮರುಪಾವತಿಸುವ ಕುರಿತಂತೆ ವಿವರ ಸಲ್ಲಿಸುವಂತೆ ಅಕ್ಟೋಬರ್‌ 5ರಂದು ನ್ಯಾಯಾಲಯವು ಕೇಂದ್ರ ಸರ್ಕಾರ ಮತ್ತು ಆರ್‌ಬಿಐಗೆ ಸೂಚಿಸಿತ್ತು. ಈ ನಿಟ್ಟಿನಲ್ಲಿ ಆರ್‌ಬಿಐ ಈ ಪ್ರಮಾಣ ಪತ್ರ ಸಲ್ಲಿಸಿದೆ.

ಬಡ್ಡಿ ಮೇಲಿನ ಬಡ್ಡಿ ಮನ್ನಾ ಮಾಡುವುದು ಆರ್ಥಿಕವಾಗಿ ದುಬಾರಿಯಾಗಲಿದೆ. ಇದರಿಂದ ಬ್ಯಾಂಕ್‌ಗಳ ಆರ್ಥಿಕ ಸ್ಥಿರತೆ ಮೇಲೆಯೂ ಪರಿಣಾಮ ಬೀರಲಿದೆ. ತಾತ್ಕಾಲಿಕವಾಗಿ ಸಾಲದ ಕಂತು ಮುಂದೂಡುವುದು ಸಹ ಸಾಲಗಾರರ ಹಿತದೃಷ್ಟಿಯಿಂದಲೂ ಒಳ್ಳೆಯದಲ್ಲ ಎಂದು ಆರ್‌ಬಿಐ ಅಭಿಪ್ರಾಯಪಟ್ಟಿದೆ.