ಖಾಸಗಿ ಶಾಲಾ ಶಿಕ್ಷಕಿಯಿಂದ ಹಿಂದೂ ಧರ್ಮದ ಅವಹೇಳನ: ಜನಾಕ್ರೋಶಕ್ಕೆ ಮಣಿದ ಆಡಳಿತ ಮಂಡಳಿ; ಶಿಕ್ಷಕಿ ವಜಾ

ಮಂಗಳೂರು: ಹಿಂದೂ ಧರ್ಮ ದೇವರುಗಳ ಬಗ್ಗೆ ಅವಹೇಳನ ಮಾಡಿದ ಆರೋಪ ಎದುರಿಸುತ್ತಿರುವ ನಗರದ ವಲೆನ್ಸಿಯಾದ ಖಾಸಗಿ ಶಾಲೆಯ ಶಿಕ್ಷಕಿಯನ್ನು ಶಾಲಾಡಳಿತ ಮಂಡಳಿ ವಜಾಗೊಳಿಸಿದೆ.

ಎರಡು ದಿನಗಳಿಂದ ಪೋಷಕರು ಮತ್ತು ಹಿಂದೂ ಸಂಘಟನೆಗಳ ಪ್ರತಿಭಟನೆಗೆ ಮಣಿದ ಆಡಳಿತ ಮಂಡಳಿ, ಶಿಕ್ಷಕಿ ಪ್ರಭಾ ಅವರನ್ನು ವಜಾ ಮಾಡಿ ಆದೇಶ ಹೊರಡಿಸಿದೆ.

ಕೆಲವು ದಿನಗಳ ಹಿಂದೆ ಶಿಕ್ಷಕಿ ಪ್ರಭಾ “ವರ್ಕ್‌ ಈಸ್‌ ವರ್ಶಿಪ್‌’ ಪಾಠ ಮಾಡುವಾಗ ಹಿಂದೂ ಧರ್ಮ ಹಾಗೂ ಶ್ರೀರಾಮದೇವರನ್ನು ಅವಹೇಳನ ಮಾಡಿದ್ದಾರೆ ಎಂದು ವಿದ್ಯಾರ್ಥಿಗಳು ತಮ್ಮ ಪೋಷಕರಲ್ಲಿ ತಿಳಿಸಿದ್ದರು. ಈ ಕುರಿತು ಪೋಷಕರೊಬ್ಬರು ಮಾತನಾಡಿದ್ದ ಬಗ್ಗೆ ಧ್ವನಿಮುದ್ರಣ ಸೋಶಿಯಲ್‌ ಮೀಡಿಯಾದಲ್ಲಿ ಹರಡಿದ್ದು ವಿಚಾರ ವಿವಾದವಾಗಿ ಬದಲಾಯಿತು. ಹಿಂದೂ ಸಂಘಟನೆಗಳು, ರಾಜಕೀಯ ಮುಖಂಡರು, ಪೋಷಕರು ಆಕ್ರೋಶ ವ್ಯಕ್ತಪಡಿಸಿ ಶಿಕ್ಷಕಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದರು.

ವಲೆನ್ಶಿಯಾದ ಶಾಲೆಯ ಆವರಣದ ಹೊರಭಾಗದಲ್ಲಿ ಗೇಟ್‌ ಬಳಿ ಸೋಮವಾರ ಬೆಳಗ್ಗೆ ಪೋಷಕರು ಹಾಗೂ ಹಿಂದೂ ಸಂಘಟನೆ ಮುಖಂಡರು ಶಿಕ್ಷಕಿಯ ಧೋರಣೆ ವಿರುದ್ಧ ಪ್ರತಿಭಟನೆ ನಡೆಸಿದರು. ಶಾಸಕ ವೇದವ್ಯಾಸ ಕಾಮತ್‌ ಅವರು ಕೂಡಾ ಈ ವೇಳೆ ಸೇರಿಕೊಂಡು ಶಾಲಾಡಳಿತ ಮಂಡಳಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಜಿಲ್ಲಾದ್ಯಂತ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಲಾಯಿತು. ಪ್ರತಿಭಟನೆಯ ತೀವ್ರತೆಗೆ ಮಣಿದ ಆಡಳಿತ ಮಂಡಳಿ ಪ್ರಮುಖರು ಕೊನೆಗೆ ಶಾಲಾ ಲೆಟರ್‌ ಹೆಡ್‌ನ‌ಲ್ಲಿ ಶಿಕ್ಷಕಿಯ ವಜಾ ಆದೇಶಪತ್ರ ಹೊರಡಿಸಿದೆ.

ಶಾಲೆಗೆ ಮುತ್ತಿಗೆ ಹಾಕಲು ಯತ್ನಿಸಿದ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಪೋಷಕರನ್ನು ಗೇಟ್‌ ಹೊರಗೆ ಪೊಲೀಸರು ತಡೆದರು. ಈ ವೇಳೆ ಶಾಸಕ ವೇದವ್ಯಾಸ ಕಾಮತ್‌ ಆಗಮಿಸಿ ಸ್ಥಳದಲ್ಲಿದ್ದ ಬಿಇಒ ಹಾಗೂ ಡಿಡಿಪಿಐ ಅವರನ್ನು ತರಾಟೆಗೆ ತೆಗೆದುಕೊಂಡರು. ಕಚೇರಿಗೆ ಕರೆಸಿ ತನಿಖೆ ಮಾಡುವುದು ಬಿಟ್ಟು ನೀವೇ ಶಾಲೆಗೆ ಬಂದು ತನಿಖೆ ಮಾಡೋದು ಸರಿಯಾ ಎಂದು ಆಕ್ಷೇಪಿಸಿದರು. ಬಳಿಕ ಶಾಲಾವರಣದ ಒಳಗೆ ತೆರಳಿದ ವೇದವ್ಯಾಸ ಕಾಮತ್‌, ಮುಖ್ಯಶಿಕ್ಷಕಿ ಮತ್ತು ಶಾಲಾಡಳಿತ ಪ್ರಮುಖರನ್ನು ತರಾಟೆಗೆ ತೆಗೆದುಕೊಂಡರು. ಹಿಂದೂ ಧರ್ಮ ಅವಹೇಳನ ಮಾಡುವುದು ಎಷ್ಟು ಸರಿ ಎಂದು ಏರುಧ್ವನಿಯಲ್ಲಿ ಪ್ರಶ್ನಿಸಿದರು.

ಪ್ರತಿಭಟನೆ ತೀವ್ರತೆ ಪಡೆಯುತ್ತಿರುವುದನ್ನು ಮನಗಂಡ ಶಾಲಾಡಳಿತ ಮಂಡಳಿಯವರು ಏಳನೇ ತರಗತಿ ಶಿಕ್ಷಕಿ ಪ್ರಭಾ ಅವರನ್ನು ವಜಾಗೊಳಿಸಿ ಆದೇಶ ಹೊರಡಿಸಿದರು. ಆದೇಶಪತ್ರ ಹಿಡಿದು ಹೊರಬಂದ ಶಾಲೆಯ ಪ್ರಮುಖರು, ಪೋಷಕರ ಎದುರು ಅದನ್ನು ಓದಿಹೇಳಿದರು.

ಆದರೆ ಆದೇಶದಲ್ಲಿ ತಪ್ಪು ಒಪ್ಪಿಕೊಂಡಿಲ್ಲ. ಒಪ್ಪಿಕೊಳ್ಳದಿದ್ದರೆ ಬಿಡುವುದಿಲ್ಲ ಎಂದು ಶಾಸಕ ಕಾಮತ್‌ ಎಚ್ಚರಿಕೆ ನೀಡಿದರು. ಈ ವೇಳೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಮತ್ತು ನಗರ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌ ಸ್ಥಳಕ್ಕಾಗಮಿಸಿ ಸೂಕ್ತ ಕ್ರಮದ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು. ಇದಕ್ಕೂ ಮೊದಲು, ವಜಾ ಆದೇಶ ಹೊರಡಿಸಿದ ಬಳಿಕ ಶಾಲೆ ವಿದ್ಯಾರ್ಥಿಗಳು, ಪೋಷಕರು ಶಾಲೆ ಎದುರು ಜೈಶ್ರೀರಾಮ್‌ ಎಂದು ಘೋಷಣೆ ಕೂಗಿ ಸಂಭ್ರಮಾಚರಿಸಿದರು.

ಈ ಪ್ರಕರಣದ ಕುರಿತು ಶಿಕ್ಷಣ ಇಲಾಖೆ ಆಂತರಿಕ ತನಿಖೆ ನಡೆಸಲಿದೆ. ಇದರ ವರದಿ ಆಧಾರದ ಮೇಲೆ ಪೊಲೀಸ್‌ ಇಲಾಖೆ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ವರದಿಯಾಗಿದೆ.