ಕಾರ್ಕಳ‌: ಅಂಗನವಾಡಿಯಲ್ಲಿ ಕಳಪೆ ಆಹಾರ ವಿತರಣೆ; ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ಶುಭದರಾವ್

ಕಾರ್ಕಳ: ತಾಲೂಕಿನ ಕೆಲವು ಅಂಗನವಾಡಿ ಕೇಂದ್ರಗಳಲ್ಲಿ ತಾಯಿ ಕಾರ್ಡ್ ಮೂಲಕ ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರಿಗೆ ವಿತರಣೆಯಾಗುವ ಆಹಾರ ಪದಾರ್ಥಗಳ ಗುಣಮಟ್ಟ ಕಳಪೆಯಾಗಿದ್ದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು ಪುರಸಭಾ ಸದಸ್ಯ ಶುಭದರಾವ್ ಆಗ್ರಹಿಸಿದ್ದಾರೆ.

ಗರ್ಭಿಣಿ ಮತ್ತು ಬಾಣಂತಿ ಸ್ತ್ರೀಯರ ಆರೋಗ್ಯದ ದೃಷ್ಟಿಯಿಂದ ಸರಕಾರವು ಅಕ್ಕಿ, ಬೇಳೆ, ಸಾಂಬಾರು ಹುಡಿ ಮತ್ತು ‌ಮೊಟ್ಟೆ ಮೊದಲಾದ ಪೋಷಕಾಂಶದ ಆಹಾರ ಪದಾರ್ಥಗಳನ್ನು ವಿತರಿಸುತ್ತಿದ್ದು ಈ ಬಾರಿ ವಿತರಣೆಯಾದ ಸಾಂಬಾರು ಹುಡಿಯ ಗುಣಮಟ್ಟ ತೀರ ಕಳಪೆಯಾಗಿದ್ದು ಉಂಡೆಗಳಾಗಿ ಪರಿವರ್ತನೆಯಾಗಿ ಬಳಕೆಗೆ ಅಯೋಗ್ಯವಾಗಿದೆ. ಇಂತಹ ಪದಾರ್ಥಗಳನ್ನು ಸೇವಿಸುವುದರಿಂದ ಸ್ತ್ರೀಯರ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಿ ಅನಾಹುತವಾಗುವ ಸಾದ್ಯತೆ ಇದೆ. ಆಹಾರ ಪದಾರ್ಥಗಳ ವಿತರಣೆಯ ಜವಾಬ್ದಾರಿ ಹೊತ್ತ ಸಂಸ್ಥೆಯ ವಿರುದ್ಧ ಕಠಿಣ ಕ್ರಮವಾಗಬೇಕು ಮತ್ತು ಅವರ ಟೆಂಡರನ್ನು ರದ್ದು ಮಾಡಬೇಕು ಎಂದು ಆಗ್ರಹಿಸುತ್ತೇನೆ.

ಈ ಹಿಂದೆಯೂ ಕೊಳೆತ ಮೊಟ್ಟೆ ವಿತರಣೆಯಾಗಿದ್ದು ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಲಿಲ್ಲ, ಈ ಬಗ್ಗೆ ಸೂಕ್ತ ಕ್ರಮ ಜರುಗಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಪೋಟೋ ಸಹಿತ ಟ್ವಿಟರ್ ಮೂಲಕ ಮತ್ತು ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಧಿಕಾರಿಯವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದ್ದಾರೆ.