ನೌಕಾಪಡೆಯ ಹಡಗು ಢಿಕ್ಕಿ ಹೊಡೆದದ್ದರಿಂದ ಬೋಟ್ ಗೆ ಹಾನಿ: ಬಿ.ಜೆ.ಪಿ.ಮೀನುಗಾರರ ಜೊತೆ ಚೆಲ್ಲಾಟ ಆಡ್ತಿದೆ ಎಂದ ಮದ್ವರಾಜ್

ಉಡುಪಿ: ಮಲ್ಪೆ ಬಂದರಿನಿಂದ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ಗೆ ಡಿಕ್ಕಿ ಹೊಡೆದ ನೌಕಾಪಡೆಯ ಹಡಗು ಏಳು ಮಂದಿ ಮೀನುಗಾರರನ್ನು ಬಲಿ ಪಡೆದಿದೆ. ಇದರ ಜತೆಗೆ ಬಿಜೆಪಿಯವರು ಮೀನುಗಾರರ ಹೆಣದ ಮೇಲೆ ರಾಜಕೀಯ ಮಾಡುತ್ತಿದ್ದಾರೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಆರೋಪಿಸಿದ್ದಾರೆ.
ಅವರು ಇಂದು ಕಾಪುವಿನ ಮುಳೂರು ಸಾಯಿರಾಧ ರೆಸಾರ್ಟ್ ನಲ್ಲಿ ಪಂಚಕರ್ಮ ಚಿಕಿತ್ಸೆ ಪಡೆಯುತ್ತಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು. ಆ ಬಳಿಕ ಸುದ್ದಿಗಾರರದಿಗೆ ಮಾತನಾಡಿದ ಅವರು ಬಿಜೆಪಿ ವಿರುದ್ಧ ಹರಿಹಾಯ್ದರು. 
ಮೀನುಗಾರರ ಜೀವದ ಜತೆಗೆ ಚುನಾವಣೆ ಮುಗಿಯುವ ವರೆಗೆ ನಾಟಕ ಮಾಡಿದ ಬಿಜೆಪಿ, ಈಗ ಶಾಸಕರೇ ಬೋಟ್ ಹುಡುಕಿದ ರೀತಿಯಲ್ಲಿ ಬಿಂಬಿಸಲು ಹೊರಟಿದ್ದಾರೆ. ಆ ಮೂಲಕ ಮೀನುಗಾರರ ಬದುಕಿನ ಜತೆಗೆ ಬಿಜೆಪಿ ಶಾಸಕರು ಚೆಲ್ಲಾಟ ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಾನು ಈ ಹಿಂದೆ ಸ್ಪಷ್ಟ ಪಡಿಸದಂತೆ ನೌಕಾಪಡೆಯ ಬೋಟ್ ನಮ್ಮ ಬೋಟ್ ಗೆ ಡಿಕ್ಕಿ ಹೊಡೆದು ಮೀನುಗಾರರನ್ನ ಕೊಲೆ ಮಾಡಿದೆ. ಇದನ್ನು ನಾನು ಬಲವಾಗಿ ಖಂಡಿಸುತ್ತೇನೆ. ಅಲ್ಲದೆ, ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ವಿಶೇಷ ನ್ಯಾಯಾಂಗಗ ತನಿಖೆ ನಡೆಸಿ, ಮೀನುಗಾರರ ಸಾವಿಗೆ ಕಾರಣವಾದ ನೌಕಾಪಡೆಯ ಸಿಬ್ಬಂದಿಗೆ ಕಠಿಣ ಶಿಕ್ಷೆಯಾಗಬೇಕೆಂದು ಆಗ್ರಹಿಸಿದರು. 
ಈ ಸಂದರ್ಭದಲ್ಲಿ ಎಂಎಲ್ ಸಿ ಭೋಜೇಗೌಡ, ಮೀನುಗಾರ ಮುಖಂಡ ಜಿ. ಶಂಕರ್, ನಾಪತ್ತೆಯಾಗಿರುವ ಮೀನುಗಾರ ದಾಮೋದರ ಸುವರ್ಣ ಅವರ ಸಹೋದರ ಪ್ರಮೋದ್ ಸುವರ್ಣ ಮೊದಲಾದವರು ಇದ್ದರು.