ಕೋಟ: ನಿಶಾಚರಿ ಕಳ್ಳರ ಬಂಧನ; 15 ಲಕ್ಷ ರೂ ಮೌಲ್ಯದ ಚಿನ್ನಾಭರಣ ಸಹಿತ ವಾಹನ ವಶ

ಕೋಟ: ರಾತ್ರಿ ಹೊತ್ತು ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಕೋಟ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ 15 ಲಕ್ಷ ರೂ. ಮೌಲ್ಯದ ಬೆಲೆ ಬಾಳುವ ಚಿನ್ನಾಭರಣ ಹಾಗೂ 3 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಕಾಪು ಎಲ್ಲೂರು ನಿವಾಸಿ ರಾಜೇಶ್ ದೇವಾಡಿಗ (38) ಮತ್ತು ಕಾರ್ಕಳ ಹೊಸ್ಮಾರು ಈದು ನಿವಾಸಿ ಮೊಹಮ್ಮದ್ ರಿಯಾಜ್ ಹೊಸ್ಮಾರ್ ಯಾನೆ ರಿಯಾಜ್ (39) ಎಂದು ಗುರುತಿಸಲಾಗಿದೆ.

ಬ್ರಹ್ಮಾವರ ವೃತ್ತದ ಕೋಟ ಠಾಣಾ ವ್ಯಾಪ್ತಿಯ ಬ್ರಹ್ಮಾವರ ತಾಲೂಕು ಪಾಂಡೇಶ್ವರ ಗ್ರಾಮದ ಮಠದ ತೋಟ ಸಾಸ್ತಾನ ಎಂಬಲ್ಲಿರುವ ಬೆಂಗಳೂರಿನ ಹೋಟೇಲ್ ಉದ್ಯಮ ನಡೆಸುತ್ತಿದ್ದ ರಾಜೇಶ ಪೂಜಾರಿಯವರ ಮನೆಯಲ್ಲಿ 2022 ಸಾಲಿನ ಸೆಪ್ಟಂಬರ್ ತಿಂಗಳಿನಲ್ಲಿ ಕಳ್ಳರು ರಾತ್ರಿ ಮನೆಯ ಬಾಗಿಲು ಒಡೆದು ಮನೆಗೆ ನುಗ್ಗಿ ಲಕ್ಷಾಂತರ ರೂಪಾಯಿ ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಕೋಟ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಈ ಬಗ್ಗೆ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ ಎಂ. ಹೆಚ್ ಇವರ ಆದೇಶದಂತೆ ಅನಂತಪದ್ಮನಾಭ, ಸಿ.ಪಿ.ಐ ಬ್ರಹ್ಮಾವರ ಇವರ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು, ಸದ್ರಿ ತಂಡದಲ್ಲಿನ ಕೋಟ ಠಾಣಾ ಪಿ.ಎಸ್.ಐ ಮಧು ಬಿ.ಇ, ಪ್ರೋಬೇಷನರಿ ಪಿ.ಎಸ್.ಐ ನೂತನ್ ಡಿ.ಇ, ಕೋಟ ಠಾಣಾ ಸಿಬ್ಬಂದಿಗಳಾದ ಪ್ರದೀಪ ನಾಯಕ್, ರಾಘವೇಂದ್ರ, ಪ್ರಸನ್ನ, ಬ್ರಹ್ಮಾವರ ಠಾಣಾ ಸಿಬ್ಬಂದಿ ವೆಂಕಟರಮಣ ದೇವಾಡಿಗ ಇವರ ತಂಡವು ಹಳೆಯ ರಾತ್ರಿ ಮನೆ ಕಳ್ಳತನ ಪ್ರಕರಣದ ಆರೋಪಿಗಳು, ಜೈಲಿನಿಂದ ಬಿಡುಗಡೆಯಾದವರ ಮಾಹಿತಿಯನ್ನು ಕಲೆಹಾಕಿ ಅವರ ಚಲನವಲನಗಳ ಮೇಲೆ ನಿಗಾ ಇರಿಸಿ, ತಾಂತ್ರಿಕ ಮಾಹಿತಿ ಹಾಗೂ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿ ಸಂಶಯಾಸ್ಪದ ಆರೋಪಿಗಳಿಗೆ ಬಲೆ ಬೀಸಿದ್ದರು.

ಜನವರಿ 22 ರಂದು ಕೋಟ ಠಾಣಾ ಸರಹದ್ದಿನ ಸಾಯಬರಕಟ್ಟೆ ಬಳಿ ಖಚಿತ ಮಾಹಿತಿಯಂತೆ ವಿಶೇಷ ತಂಡವು ಆರೋಪಿ ಪತ್ತೆಯ ಬಗ್ಗೆ ವಾಹನ ತಪಾಸಣೆ ನಡೆಸುವ ಸಮಯದಲ್ಲಿ ಬಂದ ಪೋರ್ಡ್‌ ಮಾಂಡಿಯೋ ಕಾರನ್ನು ಪರಿಶೀಲಿಸಿದಾಗ ಕಾರಿನಲ್ಲಿ ರಾಜೇಶ ದೇವಾಡಿಗ ಮತ್ತು ಮೊಹಮ್ಮದ್‌‌‌‌ ರಿಯಾಜ್‌‌‌‌‌‌‌ ಹೊಸ್ಮಾರ್‌‌‌‌‌‌‌‌ ಅದರೊಳಗಿದ್ದು, ಕಾರನ್ನು ಪರಿಶೀಲನೆ ನಡೆಸಿದಾಗ ಅವರ ಬಳಿ ಯಾವುದೇ ದಾಖಲೆಯಿಲ್ಲದ ಚಿನ್ನಾಭರಣಗಳು ಇರುವುದು ಕಂಡುಬಂದಿರುತ್ತದೆ. ಈ ಬಗ್ಗೆ ವಿಚಾರಿಸಿದಾಗ 2022 ನೇ ಸಾಲಿನ ಸೆಪ್ಟಂಬರ್‌ ತಿಂಗಳಲ್ಲಿ ಸಾಸ್ತಾನದ ಚರ್ಚ್‌ ಬಳಿ ಒಂದು ಮನೆಯಿಂದ ಕಳವು ಮಾಡಿದ ಚಿನ್ನಾಭರಣಗಳಾಗಿರುವುದಾಗಿ ಅವುಗಳನ್ನು ಮಾರಾಟ ಮಾಡಲು ಶಿವಮೊಗ್ಗ ಕಡೆಗೆ ಹೋಗುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

ಆರೋಪಿ ರಾಜೇಶ್ ದೇವಾಡಿಗ ಹಳೆಯ ಕಳ್ಳತನದ ಆರೋಪಿಯಾಗಿದ್ದು ಜೈಲುವಾಸ ಅನುಭವಿಸಿ ಬಿಡುಗಡೆಗೊಂಡಿರುತ್ತಾನೆ. ಈಗಾಗಲೇ ಈತನ ಮೇಲೆ ಉಡುಪಿ ಜಿಲ್ಲೆಯಲ್ಲಿ ಒಟ್ಟು 12 ಕಳ್ಳತನ ಪ್ರಕರಣ ದಾಖಲಾಗಿರುತ್ತದೆ. ಈತನು ಕಾಪು ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1 ಪ್ರಕರಣ, ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ 3 ಪ್ರಕರಣ, ಶಿರ್ವ ಪೊಲೀಸ್ ಠಾಣೆಯಲ್ಲಿ 2 ಪ್ರಕರಣ, ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ 4 ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ.

ಇನ್ನೋರ್ವ ಆರೋಪಿ ಮೊಹಮ್ಮದ್‌‌‌‌ ರಿಯಾಜ್‌‌‌‌‌‌‌ ಹೊಸ್ಮಾರ್‌‌‌‌ ಅಲಿಯಾಸ್ ರಿಯಾಜ್‌‌‌‌‌‌, 2018 ರಲ್ಲಿ ಕಾರ್ಕಳದ ಪ್ಲೋರಿನ್ ಮಚಾದೋ ಕೊಲೆ ಹಾಗೂ ಸುಲಿಗೆ ಪ್ರಕರಣ ಹಾಗೂ 2021 ರಲ್ಲಿ ಕಾಸರಗೊಡು ಜಿಲ್ಲೆಯ ಮಂಜೇಶ್ವರದ ರಾಜಧಾನಿ ಜ್ಯುವೆಲರ್ಸ್‌ ದರೋಡೆ ಪ್ರಕರಣದ ಆರೋಪಿಯಾಗಿರುತ್ತಾನೆ.

ಈ ಇಬ್ಬರು ಆರೋಪಿಗಳು ಹಿರಿಯಡ್ಕ ಜೈಲಿನಲ್ಲಿರುವಾಗ ಪರಿಚಯವಾಗಿದ್ದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ರಾತ್ರಿ ಹೊತ್ತು ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳ್ಳತನ ನಡೆಸಲು ಸಂಚು ನಡೆಸುತ್ತಿದ್ದರು.

ಈ ಆರೋಪಿಗಳಿಂದ ಕಳ್ಳತನ ನಡೆಸಿದ ಸುಮಾರು 15 ಲಕ್ಷದ ಚಿನ್ನಾಭರಣ, ಕಳ್ಳತನ ಮಾಡಿದ ಹಣದಿಂದ ಖರೀದಿಸಿದ ಸುಮಾರು 2 ಲಕ್ಷ 50 ಸಾವಿರ ಮೌಲ್ಯದ ಪೋರ್ಡ್‌ ಮಾಂಡಿಯೋ ಕಾರು, ಸುಮಾರು 1 ಲಕ್ಷ ಮೌಲ್ಯದ ಹಿರೋ ಕಂಪೆನಿಯ ಡೆಸ್ಟೀನಿ ಬೈಕ್ ಹಾಗೂ ಕೃತ್ಯಕ್ಕೆ ಬಳಸಿದ ಸುಮಾರು 50000 ಸಾವಿರ ಮೌಲ್ಯದ ಹೊಂಡಾ ಆ್ಯಕ್ಟೀವ್ ಮೋಟಾರ್ ಸೈಕಲ್ ಆರೋಪಿಗಳಿಂದ ಸ್ವಾಧೀನ ಪಡಿಸಲಾಗಿದೆ. ಸ್ವಾಧೀನ ಪಡಿಸಿದ ಸೊತ್ತುಗಳ ಒಟ್ಟು ಮೌಲ್ಯ ಸುಮಾರು 19 ಲಕ್ಷ ಆಗಿರುತ್ತದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಅಕ್ಷಯ ಎಂ. ಹೆಚ್ ಐ.ಪಿ.ಎಸ್, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಎಸ್.ಟಿ ಸಿದ್ದಲಿಂಗಪ್ಪ ಮಾರ್ಗದರ್ಶನದಂತೆ, ದಿನಕರ ಪಿ,ಕೆ ಪೊಲೀಸ್ ಉಪಾಧೀಕ್ಷಕರು, ಉಡುಪಿ ಉಪ ವಿಭಾಗ, ಉಡುಪಿ ರವರ ನಿರ್ದೇಶನದಂತೆ ಈ ಕಾರ್ಯಾಚರಣೆಯಲ್ಲಿ ಅನಂತ ಪದ್ಮನಾಭ, ಸಿ.ಪಿ.ಐ ಬ್ರಹ್ಮಾವರ ವೃತ್ತ, ಕೋಟ ಠಾಣಾ ಪಿ.ಎಸ್‌. ಐ ಮಧು ಬಿ.ಈ, ತನಿಖಾ ಪಿ.ಎಸ್.ಐ ಪುಷ್ಪಾ, ಪ್ರೋಬೇಷನರಿ ಪಿ.ಎಸ್.ಐ ನೂತನ್ ಡಿ.ಈ, ಕೋಟ ಠಾಣಾ ಸಿಬ್ಬಂದಿಯವರಾದ ಎ.ಎಸ್.ಐ ರವಿಕುಮಾರ್, ರಾಘವೇಂದ್ರ, ಪ್ರಸನ್ನ, ಬ್ರಹ್ಮಾವರ ಠಾಣಾ ಸಿಬ್ಬಂದಿಗಳಾದ ವೆಂಕಟರಮಣ ದೇವಾಡಿಗ, ಸಂತೋಷ ರಾಥೋಡ್, ಬ್ರಹ್ಮಾವರ ವೃತ್ತ ಕಛೇರಿ ಸಿಬ್ಬಂದಿಯವರಾದ ಎ.ಎಸ್.ಐ ಕೃಷ್ಣಪ್ಪ, ಪ್ರದೀಪ ನಾಯಕ್ ಮತ್ತು ಜಿಲ್ಲಾ ಸಿಡಿಆರ್‌ ವಿಭಾಗದ ನಿತಿನ್‌, ದಿನೇಶ್‌, ಹಾಗೂ ಚಾಲಕರಾದ ಗೋಪಾಲ ಮತ್ತು ಶೇಖರ ಸೇರುಗಾರ್ ಪ್ರಮುಖ ಪಾತ್ರ ವಹಿಸಿರುತ್ತಾರೆ. ಸದ್ರಿ ಕಾರ್ಯಾಚರಣೆಯಲ್ಲಿ ಕಾಪು ವೃತ್ತದ ಅಧಿಕಾರಿ ಮತ್ತು ಸಿಬ್ಬಂದಿಯವರು ಸಹಕರಿಸಿರುತ್ತಾರೆ. ಪ್ರಕರಣವನ್ನು ಭೇದಿಸಿರುವುದಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಅಕ್ಷಯ ಎಂ. ಹೆಚ್ ತಂಡವನ್ನು ಅಭಿನಂದಿಸಿದ್ದಾರೆ.